ಕಾರಟಗಿ: ಇಲ್ಲಿನ ಗುಲ್ಬರ್ಗ ಶರಣ ಬಸವೇಶ್ವರರ ಪುರಾಣ ಪ್ರವಚನ ಶ್ರಾವಣ ಮಾಸದಾದ್ಯಂತ ನಡೆದಿದ್ದು, ಪುರಾಣ ಮಂಗಲ,ಜೋಡು ರಥೋ ತ್ಸವ ಪ್ರಯುಕ್ತ ಶುಕ್ರವಾರ ಗಂಗೆಸ್ಥಳಕ್ಕೆ ಹೋಗಿಬರುವ ಕಾರ್ಯ ಕ್ರಮದಲ್ಲಿ ಅಪಾರ ಭಕ್ತರು ಪಾಲ್ಗೊಂಡರು.
ಬೆಳಿಗ್ಗೆ ವೀರಭದ್ರೇಶ್ವರ, ಶರಣಬಸವೇಶ್ವರ ಮೂರ್ತಿಗೆ ಮಹಾ ರುದ್ರಾಭಿಷೇಕ, ವಿಶೇಷಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಬಳಿಕ ತುಂಗಭದ್ರಾ 31ನೇ ಕಾಲುವೆ ಯಿಂದ ಪೂರ್ಣಕುಂಭ, ಕಳಶ ಹೊತ್ತ ಮಹಿಳೆಯರೊಂದಿಗೆ ಗಂಗೆಸ್ಥಳಕ್ಕೆ ಹೋಗಿಬರುವ, ಪಲ್ಲಕ್ಕಿ ಉತ್ಸವದ ಮೆರವಣಿಗೆ ಆರಂಭವಾಯಿತು.
ಮೆರವಣಿಗೆಯಲ್ಲಿ ಹೆಗ್ಗೋಡಿನ ಮೊಳಗು ಮಹಿಳಾ ಕಲಾ ತಂಡ ಡೊಳ್ಳು ಕುಣಿತ ಪ್ರದರ್ಶಿಸಿತು. ತಾಷಾ, ಝಾಂಜ್ ಮೇಳ, ಭಜನೆ, ಪುರಂತರು ಮೆರವಣಿಗೆಗೆ ಮೆರುಗು ನೀಡಿದರು. ಬಿಳಿ ಶುಭ್ರ ಬಟ್ಟೆ, ನೀರಪಂಜೆ ಹಾಕಿ ಕೊಂಡಿದ್ದ ಯುವಕರು ವಿವಿಧ ನಾದ ಗಳಿಗೆ ತಕ್ಕಂತೆ ಹೆಜ್ಜೆ ಹಾಕಿದರು.
ಗಂಗೆಸ್ಥಳಕ್ಕೆ ಹೋಗಿಬರುವ ಭಕ್ತರಿಗೆ, ಕುಂಭ, ಕಳಶ ಹೊತ್ತವರಿಗೆ ಎಸ್ಎಸ್ಕೆ ಸಮಾಜ ಬಾಂಧವರು ಉಚಿತವಾಗಿ ತಂಪು ಪಾನೀಯ ವಿತರಿಸಿದರು. ಬೆಳಿಗ್ಗೆ 10ಕ್ಕೆ ಆರಂಭಗೊಂಡ ಮೆರವಣಿಗೆ ರಾಜ್ಯ ಹೆದ್ದಾರಿ, ಕನಕದಾಸ ವೃತ್ತ, ಹಳೆಯ ಬಸ್ ನಿಲ್ದಾಣ, ಡಾ.ರಾಜಕುಮಾರ ಕಲಾಮಂದಿರ ಮಾರ್ಗವಾಗಿ ಮಧಾ್ಯಹ್ನ 3ಗಂಟೆಗೆ ದೇವಾಲಯ ತಲುಪಿತು. ಬಳಿಕ ಅನ್ನಸಂತರ್ಪಣೆ ನಡೆಯಿತು.
ಬೆಳಿಗ್ಗೆಯಿಂದ ಶರಣಬಸವೇಶ್ವರ ದೇವಾಲಯಕ್ಕೆ ಕುಟುಂಬದೊಂದಿಗೆ ಆಗಮಿಸಿ, ಪೂಜೆ ಸಲ್ಲಿಸಿ, ಭಕ್ತಿಯನ್ನು ಸಮರ್ಪಿಸುವುದು ಕಂಡುಬಂದಿತು. ಕಾರಟಗಿ ಹಾಗೂ ಸುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.