ಬಸವಪಟ್ಟಣ ಪಂಚಾಯಿತಿ ಬಿಜೆಪಿ ತೆಕ್ಕೆಗೆ
ಪ್ರಜಾವಾಣಿ ವಾರ್ತೆ Published 21 ಡಿಸೆಂಬರ್ 2012, 6:56 IST Last Updated 21 ಡಿಸೆಂಬರ್ 2012, 6:56 IST ಗಂಗಾವತಿ: ತಾಲ್ಲೂಕಿನ ಬಸವಪಟ್ಟಣ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧಿಕಾರವನ್ನು ತನ್ನ ತೆಕ್ಕೆಗೆ ಪೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಈ ಹಿನ್ನೆಲೆ ಗುರುವಾರ ಬಿಜೆಪಿ ಕಚೇರಿಯಲ್ಲಿ ಶಾಸಕ ಪರಣ್ಣ ಮುನವಳ್ಳಿ ಅಧ್ಯಕ್ಷೆ, ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಬಿಜೆಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧ್ಯಕ್ಷೆ ಸೂರ್ಯಕುಮಾರಿ, ಉಪಾಧ್ಯಕ್ಷ ಮನೋಹರ ಅವರನ್ನು ಸ್ವಾಗತಿಸಿದ ಶಾಸಕ ಪರಣ್ಣ ಮುನವಳ್ಳಿ, ಸಾರ್ವಜನಿಕರಿಗೆ ಉತ್ತಮ ಆಡಳಿತ ನೀಡುವಂತೆ ನೂತನ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯ, ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಮೆಚ್ಚಿ ಗ್ರಾಮೀಣ ಭಾಗದಲ್ಲಿ ಜನ ಬಿಜೆಪಿಗೆ ಅಧಿಕಾರ ನೀಡಿದ್ದಾರೆ.
ಗಂಗಾವತಿ ವಿಧಾನಸಭಾ ಕ್ಷೇತ್ರದ 17 ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು 13-14 ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಜನ ಪಕ್ಷದ ಪರವಾಗಿದ್ದಾರೆ ಎಂಬುವುದಕ್ಕೆ ಸಾಕ್ಷಿ ಎಂದರು. ಗ್ರಾಮ ಪಂಚಾಯಿತಿ ಸದಸ್ಯರಾದ ಶಂಕರನಾಗ, ಸರಿಗಮ ಹನುಮಂತಪ್ಪ, ಲಕ್ಷ್ಮಣ, ಗದ್ವಾಲ ಈರಪ್ಪ, ಲಕ್ಷ್ಮಿ, ರತ್ನಮ್ಮ, ವೀರೇಶ, ಹುಲುಗಪ್ಪ, ಪರಶುರಾಮ, ಗ್ರಾಮದ ಮುಖಂಡರಾದ ಜಟ್ಟಿ ವೀರಪ್ರಸಾದ, ಮನೋಹರ ಮೊದಲಾದವರಿದ್ದರು.