ಬಸವಕಲ್ಯಾಣ: ಬಸವಮುಕ್ತಿನಾಥಯ್ಯ ಪವಿತ್ರ ಕಾಯಕ ಮಾಡುವ ನಿರ್ಮಲ ಹೃದಯದ ಶ್ರೇಷ್ಠ ಶರಣರಾಗಿದ್ದರು ಎಂದು ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು ಹೇಳಿದರು.
ಇಲ್ಲಿನ ಹೆಳವರ ಓಣಿಯಲ್ಲಿ ಭಾನುವಾರ ಹಮ್ಮಿಕೊಂಡ ಬಸವಮುಕ್ತಿನಾಥಯ್ಯ ಮೂರ್ತಿ ಪ್ರತಿಷ್ಠಾಪನೆ ಮತ್ತು ಹೆಳವ ಸಮಾಜದ ತಾಲ್ಲೂಕು ಸಮಾವೇಶದ ನೇತೃತ್ವವಹಿಸಿ ಮಾತನಾಡಿದರು.
ಶರಣರ, ಸಂತರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಬದುಕು ಪಾವನವಾಗುತ್ತದೆ. ಜೀವನಕ್ಕೆ ನೀತಿಯ ನೆಲೆಗಟ್ಟು ಇಲ್ಲದಿದ್ದರೆ ಬದುಕಿಯೂ ನಿರರ್ಥಕ ಎಂದು ಅಭಿಪ್ರಾಯಪಟ್ಟರು.
ಬೆಲ್ದಾಳ ಬಸವಯೋಗಾಶ್ರಮದ ಸಿದ್ಧರಾಮ ಶರಣರು ಮಾತನಾಡಿ ಸಮಾಜ ಒಗ್ಗಟ್ಟಿನಿಂದ ಇರಬೇಕು. ಬಸವಮುಕ್ತಿನಾಥಯ್ಯ ಶರಣರ ಸ್ಮಾರಕ ಸ್ಥಾಪಿಸುವ ಸಂಬಂಧ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದೂ ಹೇಳಿದರು. ಹಾರಕೂಡ ಚೆನ್ನವೀರ ಶಿವಾಚಾರ್ಯರು ಮಾತನಾಡಿ ಜಾತಿ, ಧರ್ಮದ ಭೇದವಿಲ್ಲದೆ ಸರ್ವರೂ ಸಹಬಾಳ್ವೆ ನಡೆಸಿದರೆ ಸಮಾಜದಲ್ಲಿ ಶಾಂತಿ ಇರುತ್ತದೆ ಎಂದರು.
ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಮಾತನಾಡಿ ಮುಕ್ತಿನಾಥಯ್ಯ ದೇವಸ್ಥಾನದ ಅಭಿವೃದ್ಧಿಗೆ 50 ಸಾವಿರ ರೂಪಾಯಿ ಮಂಜೂರು ಮಾಡಲಾಗಿದ್ದು ಅವಶ್ಯಕವಿದ್ದರೆ ಇನ್ನೂ ಹೆಚ್ಚಿನ ಹಣ ಕೊಡಲಾಗುವುದು ಎಂದು ಭರವಸೆ ಕೊಟ್ಟರು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿದರು. ಹೆಳವ ಸಮಾಜದ ರಾಜ್ಯಾಧ್ಯಕ್ಷ ಈ.ಕೃಷ್ಣಪ್ಪ, ಬಸವಧರ್ಮ ಪೀಠದ ಸಿದ್ಧರಾಮೇಶ್ವರ ಸ್ವಾಮೀಜಿ, ತ್ರಿಪುರಾಂತ ರುದ್ರಮುನಿ ಶಿವಾಚಾರ್ಯರು, ಶಂಕರಲಿಂಗ ಸ್ವಾಮೀಜಿ, ವಿಭೂತಿ ಬಸವಾನಂದ, ಶಂಭುಲಿಂಗ ಕಾಮಣ್ಣ, ಸೈಯದ್ಪಾಶಾ ಹೈದ್ರಾಬಾದ್ ಮಾತನಾಡಿದರು.
ನಗರಸಭೆ ಸದಸ್ಯೆ ಬಾಯಮ್ಮ, ಪ್ರಮುಖರಾದ ದಶರಥ ಅಂದಕುಲ, ಬಾಬು ಟೈಗರ್, ತಿಪ್ಪಣ್ಣ ಯರಸನ್, ವೈಜನಾಥ ಕಾಮಶೆಟ್ಟಿ, ಶೆಬ್ಬೀರಪಾಶಾ ಮುಜಾವರ್ ಉಪಸ್ಥಿತರಿದ್ದರು. ಸುಭಾಷ ಯರಸನ್ ಸ್ವಾಗತಿಸಿದರು. ಡಾ.ಬಸವರಾಜ ಪಂಡಿತ ನಿರೂಪಿಸಿದರು. ಕಾರ್ಯಕ್ರಮದ ಮೊದಲು ಮೂರ್ತಿಯ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.