ADVERTISEMENT

ಮೀಸಲು ಪಡೆ: ಥಂಡ ಪಾನಿ, ಗರಂ ಟೀ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 6:48 IST
Last Updated 23 ಏಪ್ರಿಲ್ 2013, 6:48 IST

ಕನಕಗಿರಿ: ಜಿಲ್ಲೆಯ ಪರಿಶಿಷ್ಟ ಜಾತಿ (ಎಸ್ಸಿ)ಮೀಸಲು ಕ್ಷೇತ್ರವಾಗಿರುವ ಕನಕಗಿರಿ ವಿಧಾನಸಭಾ ಕ್ಷೇತ್ರವನ್ನು ಅತಿ ಸೂಕ್ಷ್ಮ ಕ್ಷೇತ್ರ ಎಂದು ಗುರುತಿಸಲಾಗಿದೆ,

ಚುನಾವಣೆ ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಸಲು ಜಿಲ್ಲಾಡಳಿತ ಸಿದ್ದತೆ ನಡೆಸಿದ್ದು ಭರದಿಂದ ಕೆಲಸ ಆರಂಭಿಸಿ ವಿವಿಧ ಹಂತದ ಅಧಿಕಾರಿಗಳನ್ನು ಕ್ಷೇತ್ರವಾರು ನೇಮಿಸಿದೆ. ಇಲ್ಲಿನ ಎಪಿಎಂಸಿ ಸಮುದಾಯ ಭವನದಲ್ಲಿ ವಾಸ್ತವ್ಯ ಹೂಡಿರುವ ಮಧ್ಯಪ್ರದೇಶದ ಸಿಂದುವಾಳ ಜಿಲ್ಲೆಯ ವಿಶೇಷ ಸಶಸ್ತ್ರ ಪೋಲಿಸ್ ಪಡೆ ಪೇದೆಗಳು ಚುರುಕಿನಿಂದ ಕರ್ತವ್ಯ ನಿಭಾಯಿಸುತ್ತಿರುವುದು ಕಾಣಿಸಿದೆ.
ಒಬ್ಬ ಸಿಪಿಐ, ನಾಲ್ಕು ಮಂದಿ ಸಬ್ ಇನ್ಸ್‌ಪೆಕ್ಟರ್, ಹತ್ತು ಮಂದಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ನೂರು ಜನ ಪೇದೆಗಳು ಪ್ರವಾಸಿ ಮಂದಿರ, ಸಮುದಾಯ ಭವನದಲ್ಲಿ ವಾಸ್ತವ್ಯ ಹೂಡಿದ್ದಾರೆ, 

ಸಮರ್ಪಕ ಕುಡಿಯುವ ನೀರಿನ ಸಮಸ್ಯೆ, ಸಮುದಾಯ ಭವನದ ಹತ್ತಿರ ಸ್ವಲ್ಪ ಗಲೀಜು ಬಿಟ್ಟರೆ ಎಲ್ಲಾ ಸೌಲಭ್ಯಗಳು ಉತ್ತಮವಾಗಿವೆ ಎಂದು ಲಖನ್‌ಲಾಲ್ ಸೈರಾಯಂ, ಶಿಯಾಜಸಿಂಗ್ ಠಾಕೂರ್ ತಿಳಿಸುತ್ತಾರೆ.

ಮಧ್ಯಪ್ರದೇಶದಲ್ಲಿ ಇಷ್ಟೊಂದು ಪ್ರಮಾಣದ ಬಿಸಿಲು ಇಲ್ಲ, ತಾವು ಈ ವಾತಾವರಣಕ್ಕೆ ಹೊಂದಿ ಕೊಂಡಿದ್ದೇವೆ, ಬೆಳಿಗ್ಗೆ ತಂಡ ಪಾನಿಯಿಂದ (ತಣ್ಣೀರು) ಸ್ನಾನ ಮಾಡಿ ಗರ್‌ಂ (ಬಿಸಿ) ಕುಡಿಯುತ್ತೇವೆ, ಸ್ನಾನಕ್ಕೆ ಬಿಸಿ ನೀರೆ ಬೇಕೆ ಎಂದು ತಾವು ಭಾವಿಸಿಲ್ಲ, ಬಿಸಿ ನೀರಿಗಿಂತ ಕರ್ತವ್ಯ ಮುಖ್ಯ ಎಂದು ಎಸ್‌ಐ ಎಸ್. ಎಲ್. ಜಸ್ವರ್ ವಿನ್ರಮವಾಗಿ ಹೇಳಿದರು. ಸಮಯ ಸಿಕ್ಕಾಗ ಇಲ್ಲಿನ ಕನಕಾಚಪತಿ ದೇವಸ್ಥಾನ, ವೆಂಕಟಪತಿ ಬಾವಿ, ಪುಷ್ಕರಣಿಗೆ ಭೇಟಿ ನೀಡಿ ಆನಂದ ಪಟ್ಟಿದ್ದೇವೆ, ಕೆಲವರು ಹಂಪೆ ಸೇರಿ ಸುತ್ತಮುತ್ತಲಿನ ಸ್ಥಳಕ್ಕೆ ತೆರಳಿದ್ದಾರೆ ಎಂದರು.

ಊಟಕ್ಕೆ ಏನು ತೊಂದರೆಯಾಗಿಲ್ಲ, ಮಧ್ಯಪ್ರದೇಶದ 6 ಬಾಣಸಿಗರು ಬಂದಿದ್ದಾರೆ, ನೀರಿನ ಸಮಸ್ಯೆ ಇಲ್ಲ, ಮಡಿವಾಳ, ಬಾರ್‌ಬಾರ್, ಕಸಗೂಡಿಸುವವರು ತಮ್ಮಂದಿಗೆ ಇದ್ದಾರೆ ಎಂದು ಅವರು ಮಾಹಿತಿ ನೀಡಿದರು. ಮನರಂಜನೆಗೆ ದೂರದರ್ಶನ ವ್ಯವಸ್ಥೆ ಮಾಡಿದ್ದಾರೆ, ಕುಟುಂಬದ ಸದಸ್ಯರ ಯೋಗಕ್ಷೇಮ ವಿಚಾರಿಸಲು ಇಲಾಖೆಯಿಂದ ವೈರ್‌ಲೆಸ್,  ಹಿಂದಿ ಪತ್ರಿಕೆಯ ಸೌಲಭ್ಯ ಇಲ್ಲ ಎಂದು ಪೇದೆಗಳು ತಿಳಿಸಿದರು. ಕರ್ನಾಟಕದಲ್ಲಿ ನೋಡಬೇಕಾದ ಐತಿಹಾಸಿಕ ಸ್ಥಳಗಳ ಬಗ್ಗೆ ಪುಸ್ತಕದಲ್ಲಿ ಓದಿ ತಿಳಿದಿದ್ದೇವೆ, ಚುನಾವಣೆಯ ನಂತರ ನೋಡುವ ಆಸೆ ಇದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.