ADVERTISEMENT

ಮೌಢ್ಯತೆಯ ವೈಭವೀಕರಣದಿಂದ ದುಷ್ಪರಿಣಾಮ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 7:00 IST
Last Updated 19 ಫೆಬ್ರುವರಿ 2011, 7:00 IST
ಮೌಢ್ಯತೆಯ ವೈಭವೀಕರಣದಿಂದ ದುಷ್ಪರಿಣಾಮ
ಮೌಢ್ಯತೆಯ ವೈಭವೀಕರಣದಿಂದ ದುಷ್ಪರಿಣಾಮ   

ಹನುಮಸಾಗರ:  ಇಂದಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳು ಸೇರಿದಂತೆ ಹಲವರು ಪವಾಡಗಳನ್ನು ವೈಭವೀಕರಿಸಿ ಪ್ರದರ್ಶನ ಮಾಡುತ್ತಿದ್ದು ಅದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಂತಹ ಪವಾಡಗಳನ್ನು ಯಾವತ್ತೂ ನಂಬಬೇಡಿ ಎಂದು ಮುಖ್ಯಶಿಕ್ಷಕ ಅಮರೇಶ ತಮ್ಮಣ್ಣವರ ಹೇಳಿದರು. ಇಲ್ಲಿನ ಬಾಲಕಿಯರ ಪ್ರೌಢಶಾಲೆಯಲ್ಲಿ ಕಲ್ಪನಾ ಚಾವ್ಲಾ ವಿಜ್ಞಾನ ಕ್ಲಬ್ ವತಿಯಿಂದ ಗುರುವಾರ ನಡೆದ ಪವಾಡ ರಹಸ್ಯ ಬಯಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವೈಜ್ಞಾನಿಕ ಹಿನ್ನೆಲೆ ಇಟ್ಟುಕೊಂಡೆ ಪ್ರತಿಯೊಂದು ಪವಾಡಗಳು ನಡೆಯುತ್ತವೆ. ಎಲ್ಲಿಯವರೆಗೆ ಪವಾಡಗಳನ್ನು ನಂಬುವ ಜನ ಇರುತ್ತಾರೋ ಅಲ್ಲಿಯವರೆಗೆ ಪವಾಡಗಳು ನಡೆಯುತ್ತಲೇ ಇರುತ್ತವೆ. ಅಂತಹ ಪವಾಡಗಳನ್ನು ನಂಬುವ ಸಾಮಾನ್ಯ ಜನರು ಬದುಕಿನಲ್ಲಿ ಮೋಸ ಹೋಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು. ಪವಾಡ ಬಯಲು ಕಾರ್ಯಕ್ರಮ ನಡೆಸಿಕೊಟ್ಟ ನಿರ್ವಾಹಕ ಶ್ಯಾಮ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೈಚಳಕದಿಂದ ಹಾಗೂ ರಾಸಾಯನಿಕ ವಸ್ತುಗಳನ್ನು ಬಂಡವಾಳವನ್ನಾಗಿ ಟ್ಟುಕೊಂಡು ಪವಾಡಗಳನ್ನು ಮಾಡಿ ಜನರನ್ನು ನಂಬುವ ಹಾಗೆ ಮಾಡುವ ಸಾಕಷ್ಟು ಜನ ಸಮಾಜದಲ್ಲಿದ್ದಾರೆ.
 
ಇಂತಹ ರಹಸ್ಯಗಳನ್ನು ನಿರ್ಲಕ್ಷಮಾಡಿದರೆ ಅಥವಾ ತಿಳಿದುಕೊಂಡರೆ ಪವಾಡಗಳು ನಿಂತುಹೋಗುತ್ತವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಲವಾರು ಪವಾಡಗಳನ್ನು ವಿದ್ಯಾರ್ಥಿಗಳಿಂದಲೇ ಬಯಲು ಮಾಡಿ ಅದರ ಹಿಂದಿರುವ ವೈಜ್ಞಾನಿಕ ಸತ್ಯದ ಬಗ್ಗೆ ತಿಳಿಸಿಕೊಟ್ಟರು. ಪಿ.ವಿ.ಕುಲಕರ್ಣಿ, ಕಲ್ಪನಾ ಚಾವ್ಲಾ ವಿಜ್ಞಾನ ಕ್ಲಬ್ ಕಾರ್ಯದರ್ಶಿ ಶಂಕ್ರಪ್ಪ, ಶೇಖರಪ್ಪ ರುಮಾಲದ, ಗುರುರಾಜ, ಷಣ್ಮುಖಪ್ಪ ಕರಡಿ, ಹಬೀಬಪಾಷಾ, ಬಸಪ್ಪ ನಂದಾಪೂರ ಮತ್ತಿತರರು ಇದ್ದರು. ಪೂಜಾ ಕುಲಕರ್ಣಿ ಪ್ರಾರ್ಥಿಸಿದರು, ಶಂಕ್ರಪ್ಪ ಸ್ವಾಗತಿಸಿದರು. ಗುರುರಾಜ ಎಸ್ ಕಾರ್ಯಕ್ರಮ ನಿರೂಪಿಸಿದರು. ಶೇಖರಪ್ಪ ರುಮಾಲದ ವಂದಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.