ADVERTISEMENT

ಯಾರಿಗೂ ಬೇಡವಾದ ‘ಬೇವೂರು ಬಸ್‌ ತಂಗುದಾಣ’

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 6:38 IST
Last Updated 25 ಸೆಪ್ಟೆಂಬರ್ 2013, 6:38 IST

ಯಲಬುರ್ಗಾ: ತಾಲ್ಲೂಕಿನ ಬೇವೂರು ಗ್ರಾಮದ ಬಸ್‌ ನಿಲ್ದಾಣ ಇದ್ದು ಇಲ್ಲದಂತಿದೆ. ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ಈ ನಿಲ್ದಾಣವನ್ನು ನಿರ್ಮಿಸಿ ಜನತೆ ಅನುಕೂಲ ಮಾಡಿಕೊಟ್ಟು ಸುಮಾರು 6–7ವರ್ಷಗಳೆ ಕಳೆದಿವೆ. ಆದರೆ ಇನ್ನೂವರೆಗೆ ಯಾವೊಂದು  ಬಸ್‌ ನಿಲ್ದಾಣದೊಳಗೆ ಬಂದಿಲ್ಲ, ಜನರು ಈ ನಿಲ್ದಾಣದಿಂದ ಪ್ರಯಾಣ ಬೆಳೆಸಿಲ್ಲ. ಬೇರೆ ರೀತಿಯಲ್ಲಿ  ಉಪಯೋಗಿಸಿಕೊಳ್ಳುವುದು ಮಾತ್ರ ನಿಂತಿಲ್ಲ.

ಕೊಪ್ಪಳ–ಕುಷ್ಟಗಿ–ಯಲಬುರ್ಗಾ ತಾಲ್ಲೂಕು ಕೇಂದ್ರಕ್ಕೆ ಹೋಗುವ ರಸ್ತೆಗೆ ಸ್ವಲ್ಪ ದೂರದಲ್ಲಿ­ರುವ ಈ ನಿಲ್ದಾಣ ಗ್ರಾಮ ಪಂಚಾಯಿತಿ ಎದುರಲ್ಲಿಯೇ ಇದೆ. ಆದರೆ ಕೆಎಸ್‌ಆರ್‌ಟಿಸಿ  ಬಸ್ಸಗಳು ಮಾತ್ರ ಒಮ್ಮೆಯೂ ಊರೊಳಗಿನ ನಿಲ್ದಾಣಕ್ಕೆ ಹೋಗಿ ಬರದೇ ವೃತ್ತದಲ್ಲಿಯೇ ನಿಂತು ಜನರನ್ನು ಹತ್ತಿಸಿಕೊಂಡು ಹೋಗುತ್ತವೆ. ಇದರಿಂದ ಗ್ರಾಮಸ್ಥರು ಅಧಿಕೃತ ಬಸ್‌ ನಿಲ್ದಾಣವನ್ನು ದಾಟಿ ವೃತ್ತಕ್ಕೆ ಬಂದು ನಿಲ್ಲಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.

ಗ್ರಾಮದಿಂದ ಸುಮಾರು ಒಂದು ಕಿ.ಮೀ ದೂರದಲ್ಲಿರುವ ವೃತ್ತಕ್ಕೆ ನಡೆದುಕೊಂಡು ಬರುವಷ್ಟರಲ್ಲಿಯೇ ಬಸ್‌ಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುವುದರಿಂದ ಸಾರಿಗೆ ವ್ಯವಸ್ಥೆ ಮಾತ್ರ ಗ್ರಾಮಸ್ಥರಿಗೆ ದೊರೆಯುತ್ತಿಲ್ಲ ಎಂಬುದು ಗ್ರಾಮದ ಪ್ರಗತಿ ಪರ ಸಂಘಟನೆಯ ಶರಣಬಸವರಾಜ ಹೊಸ್ಮನಿ ಆರೋಪಿಸಿದ್ದಾರೆ.

ರೈತರ ಕಣ: ಬಸ್‌ ನಿಲ್ದಾಣ ರೈತರ ಪಾಲಿಗೆ ವರದಾನವಾಗಿದೆ. ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಈ ನಿಲ್ದಾಣದ ಮೈದಾನದಲ್ಲಿಯೇ ನಡೆಸುತ್ತಾರೆ. ಅಲ್ಲದೇ ನಿಲ್ದಾಣದ ಕೊಣೆಗಳನ್ನು ಉಗ್ರಾಣವನ್ನಾಗಿ ಮಾಡಿಕೊಂಡಿದ್ದು, ಒಟ್ಟಾರೆ ಪ್ರಯಾಣಿಕರಿಗೆ ಸಾರಿಗೆ ಸೇವೆ ಒದಗಿಸಬೇಕಾಗಿದ್ದ ಈ ನಿಲ್ದಾಣ ರೈತರಿಗೆ ಕಣವಾಗಿ ಹಾಗೂ ಧಾನ್ಯಗಳನ್ನು ಸಂಗ್ರಹಿಸಲು ಉಗ್ರಾಣವಾಗಿ ಮಾರ್ಪಾಡಾಗಿದೆ.

ಇಚ್ಛಾಶಕ್ತಿಯ ಕೊರತೆ: ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಕ್ಷೇತ್ರವನ್ನು ಪ್ರತಿನಿಧಿಸುವ ಬಹುತೇಕ ಶಾಸಕರು ಕೂಡ ಈ ಬಗ್ಗ ತಲೆ ಕೆಡಸಿಕೊಳ್ಳದೇ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಅನೇಕ ಸೌಲಭ್ಯಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಇದ್ದ ಸೌಲಭ್ಯಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವ ಕನಿಷ್ಠ ಸೌಜನ್ಯ ತೋರದ ಜನಪ್ರತಿನಿಧಿಗಳು ವೃತ್ತದಲ್ಲಿ ಮತ್ತೊಂದು ನಿಲ್ದಾಣ ಮಾಡುವ ಚಿಂತನೆ ನಡೆಸಿದ್ದು ಅವರಲ್ಲಿನ ಇಚಾ್ಛಶಕ್ತಿಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ ಎಂದು ದಲಿತ ದಸಂಸದ ಪುಟ್ಟರಾಜ ಪೂಜಾರ ಹೇಳುತಾ್ತರೆ.

ಬಸ್‌ ನಿಲ್ದಾಣಕ್ಕೆ ಸೂಕ್ತ ಕಾಂಪೌಂಡ್‌ ನಿರ್ಮಿಸಬೇಕು, ಹೆಚ್ಚಿನ ಸಂಖ್ಯೆಯ ಬಸ್‌ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ಗ್ರಾಮದ ಜನತೆಗೆ ಹತ್ತಿರ ವಾಗುವ ಈ ನಿಲ್ದಾಣವನ್ನು ಅಭಿವೃದ್ಧಿಗೊಳಿಸಿ ಸೂಕ್ತ ಕ್ರಮ ಗೊಳ್ಳಬೇಕು ಎಂಬ ಬೇಡಿಕೆಯ ಜೊತೆಗೆ ನಿರ್ಲಕ್ಷಿಸಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದಾ್ದರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.