ADVERTISEMENT

ರೈತರಲ್ಲಿ ಆಶಾಭಾವ ಮೂಡಿಸಿದ ತೊಗರಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 8:17 IST
Last Updated 21 ಅಕ್ಟೋಬರ್ 2017, 8:17 IST
ಕುಷ್ಟಗಿ ಸಮೀಪದ ಹೊಲದಲ್ಲಿ ಬೆಳೆದು ನಿಂತಿರುವ ತೊಗರಿ
ಕುಷ್ಟಗಿ ಸಮೀಪದ ಹೊಲದಲ್ಲಿ ಬೆಳೆದು ನಿಂತಿರುವ ತೊಗರಿ   

ಕುಷ್ಟಗಿ: ಹಿಂಗಾರು ಹಂಗಾಮಿನಲ್ಲಿ ಉತ್ತಮವಾಗಿ ಮಳೆಯಾಗಿರುವುದರಿಂದ ಈ ಭಾಗದಲ್ಲಿ ತೊಗರಿ ಬೆಳೆ ಉತ್ತಮವಾಗಿ ಬೆಳೆದಿದ್ದು, ರೈತರಲ್ಲಿ ಆಶಾಭಾವ ಮೂಡಿದೆ.
ತೊಗರಿಯನ್ನು ಐದಾರು ಅಡಿ ಅಂತರದ ಸಾಲುಗಳಲ್ಲಿ ಬಿತ್ತನೆ ಮಾಡಲಾಗುತ್ತಿದ್ದು , ಮುಂಗಾರು ಹಂಗಾಮಿನಲ್ಲಿ ರೈತರು ಮೆಕ್ಕೆಜೋಳ ಮತ್ತು ಸಜ್ಜೆಯೊಂದಿಗೆ ಅಂತರ ಬೆಳೆಯಾಗಿ ತೊಗರಿ ಬಿತ್ತನೆ ಮಾಡಿದ್ದರು.

ಮುಂಗಾರಿನಲ್ಲಿ ತೇವಾಂಶ ಕೊರತೆಯಿಂದ ಮೆಕ್ಕೆಜೋಳ, ಸಜ್ಜೆ ಬೆಳೆಗಳು ಕೈಕೊಟ್ಟವು. ಆದರೆ, ಉತ್ತಮವಾಗಿ ಮಳೆಯಾಗಿ ರುವುದರಿಂದ ತೊಗರಿಗೆ ಅನುಕೂ ಲಾಗಿದೆ. ಹುಲುಸಾಗಿ ಅಷ್ಟೇ ದಟ್ಟವಾಗಿ ಬೆಳೆದು ನಿಂತಿರುವ ತೊಗರಿ ಬೆಳೆ, ಅಕ್ಕಪಕ್ಕದ ಸಾಲುಗಳು ಒಂದಕ್ಕೊಂದು ಕಲೆತಿವೆ. 

ಆದರೆ, ಹಿಂದಿನ ವರ್ಷ ಬೇಳೆಕಾಳುಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಬಹಳಷ್ಟು ರೈತರು ತೊಗರಿಯನ್ನೇ ಪ್ರಮುಖ ವಾಗಿರಿಸಿಕೊಂಡು ಇಡಿ ಬೆಳೆಯಾಗಿ ಬೆಳೆದಿದ್ದರು. ನಂತರ ಮಳೆ ಬಾರದೆ ತೊಗರೆ ಬೆಳೆ ಹಾಳಾಗಿತ್ತು. ಈ ವರ್ಷದ ಸ್ಥಿತಿ ಭಿನ್ನವಾಗಿದ್ದು ಉಳಿದ ಬೆಳೆಗಳಿಗಿಂತ ತೊಗರೆ ಉತ್ತಮವಾಗಿದೆ.

ADVERTISEMENT

ತಾಲ್ಲೂಕಿನ ಬಹುತೇಕ ಜಮೀನುಗಳಲ್ಲಿ ತೊಗರಿ ಬೆಳೆ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಸದ್ಯ, ಮೊಗ್ಗು ಹೂವು ಹಂತದಲ್ಲಿದ್ದು , ಮಳೆ ಬಿಡುವು ಪಡೆದಿದೆ. ಹಗಲಿನಲ್ಲಿ ಪ್ರಖರ ಬಿಸಿಲು ರಾತ್ರಿವೇಳೆ ಚಳಿ ಆವರಿಸುತ್ತಿದ್ದು ಬೆಳೆಗೆ ಪೂರಕವಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಸದ್ಯ ಯಾವುದೇ ರೋಗ, ಕೀಟ ಹಾವಳಿ ಕಂಡುಬಂದಿಲ್ಲ. ಇದೇ ರೀತಿ ಮುಂದುವರಿದರೆ ಈ ಬಾರಿ ತೊಗರೆ ಉತ್ತಮ ಇಳುವರಿ ಬರುವ ಸಾಧ್ಯತೆ ಇದೆ ಎಂದು ಶಾಖಾಪುರದ ರೈತ ಹನುಮಗೌಡ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.