ADVERTISEMENT

ರೊಚ್ಚಿಗೆದ್ದ ಗ್ರಾಮಸ್ಥರು; ವಾಹನ ಜಖಂ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 10:00 IST
Last Updated 13 ಜನವರಿ 2012, 10:00 IST

ಹನುಮಸಾಗರ: ಅನುಮಾನಾಸ್ಪದವಾಗಿ ಅಲೆದಾಡುತ್ತಿದ್ದ ಏಳು ಜನ ಅಪರಿಚಿತ ವ್ಯಕ್ತಿಗಳನ್ನು ಮಕ್ಕಳ ಕಳ್ಳ ಸಾಗಾಣಿಕೆದದಾರರು ಎಂದು ಶಂಕಿಸಿದ ಗ್ರಾಮಸ್ಥರು ಬಂಧಿಸಿ ಹಿಗ್ಗಾ ಮುಗ್ಗಾ ಥಳಿಸಿ ಕೂಡಿ ಹಾಕಿದ ಪ್ರಕರಣ ಇಲ್ಲಿಗೆ ಸಮೀಪದ ನಿಲೋಗಲ್ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ಮಹಾರಾಷ್ಟ್ರದ ಪಾಸಿಂಗ್ ಹೊಂದಿರುವ ವಾಹನದಲ್ಲಿ ಬಂದಿದ್ದ ಬಿಜಾಪೂರ ಹಾಗೂ ಮಹರಾಷ್ಟ್ರದ ಮೂಲದವರೆನ್ನಲಾದ ಈ ಎಳು ಜನರು ಇಲ್ಲಿನ ಗುಡೂರ ರಸ್ತೆಯಲ್ಲಿ ವಾಹನ ದುರಸ್ಥಿ ಮಾಡುವ ನೆಪಮಾಡಿಕೊಂಡು ನಿಂತಿದ್ದರು ಎನ್ನಲಾಗಿದೆ.

ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಮಕ್ಕಳಿಗೆ ಚಾಕಲೇಟ್ ತೋರಿಸಿ ತಮ್ಮೆಡೆಗೆ ಆಕರ್ಷಣೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದ್ದು, ಗಾಬರಿಗೊಂಡ ಇಬ್ಬರು ಮಕ್ಕಳು ಅವರ ಕೈಗೆ ಸಿಗದೆ ಓಡುತ್ತಿದ್ದಾಗ ಈ ವ್ಯಕ್ತಿಗಳು ಆ ಮಕ್ಕಳನ್ನು ಹಿಡಿಯಲು ಪ್ರಯತ್ನಸಿದ್ದಾರೆ. ಆದಾಗ್ಯೂ ಮಕ್ಕಳು ಪರಾಗಿದ್ದಾರೆ ಎನ್ನಲಾಗಿದೆ.

ದೂರದಿಂದಲೇ ಈ ದೃಶ್ಯವನ್ನು ಕಂಡ ಕೆಲ ಗ್ರಾಮದ ಯುವಕರು ಸಂಶಯಪಟ್ಟು ಕೂಡಲೇ ಓಡಿ ಹೋಗಿ ಈ ಅಪರಿಚಿತ ವ್ಯಕ್ತಿಗಳನ್ನು ತಡೆದು ನಿಲ್ಲಿಸಿ ವಿಚಾರ ಮಾಡುತ್ತಿದ್ದಾಗ ಅವರಿಂದ ಗೊಂದಲದ ಹೇಳಿಕೆಗಳು ಬಂದಿವೆ. ಅಲ್ಲದೆ ಈ ಸಂದರ್ಭದಲ್ಲಿ ಗುಂಪಿನಲ್ಲಿದ್ದ ಇಬ್ಬರು ಪರಾರಿಯಾಗಲು ಯತ್ನಸಿದರಾದರೂ ಸುತ್ತಲು ಜಾಲಿಮುಳ್ಳಿನ ಕಾಡು ಅರಣ್ಯ ಇದ್ದುದರಿಂದ ಓಡಲು ಸಾಧ್ಯವಾಗದೇ  ಹಾಗು ಸುತ್ತಲೂ ವ್ಯೆಹದ ರೂಪದಲ್ಲಿ ಜನ ಜಮಾಯಿಸಿದ್ದರಿಂದ ಈ ಆರೋಪಿಸಗಳು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಅಲ್ಲದೆ ಸ್ಥಳಿಯರು ಈ ವ್ಯಕ್ತಿಗಳು ತಮ್ಮಂದಿಗೆ ತಂದಿದ್ದ ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ದೊಣ್ಣೆ, ಚಾಕುದಂತಹ ಮಾರಕಾಸ್ತ್ರಗಳು, ಕೆಲವೊಂದು ವಿಷಪೂರಿತ ಔಷಧಿಗಳು ಇರುವುದ್ನು ಕಂಡು ಗಾಬರಿಗೊಂಡ ಸ್ಥಳೀಯರು, ವಾಹನ ಸಮೇತವಾಗಿ ಅಲ್ಲಿಂದಲೇ ನೂರಾರು ಹಿಗ್ಗಾ ಮುಗ್ಗಾ ತಳಿಸುತ್ತಾ ಗ್ರಾಮದೊಳಗೆ ಕರೆ ತಂದಿದ್ದಾರೆ.

ಸುದ್ದಿ ಊರು ತುಂಬ ಹಬ್ಬುತ್ತಿದ್ದಂತೆ ನಿಲೋಗಲ್ ಸೇರಿದಂತೆ ಸುತ್ತಲಿನ ಹಲವಾರು ಹಳ್ಳಿಗರು ಜಮಾಯಿಸಿ ಊರ ಮಧ್ಯದ ಭಗೀರಥ ಸಮುದಾಯ ಭವನ ಮುಂದಿರುವ ಮರಕ್ಕೆ ಕಟ್ಟಿ ಹಾಕಿ ಮತ್ತಷ್ಟು ಧರ್ಮದೇಟು ನೀಡಿದ್ದಾರೆ.

ಈ ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಸ್ಥಳೀಯ ಹಿರಿಯರು ರೊಚ್ಚಿಗೆದ್ದ ಗ್ರಾಮಸ್ಥರನ್ನು ಸಮಾಧಾನಪಡಿಸಿ ಈ ವ್ಯಕ್ತಿಗಳನ್ನು ಸಮುದಾಯ ಭವನದಲ್ಲಿ ಕೂಡಿ ಹಾಕಿ ಜೀವಾಪಾಯದಿಂದ ಪಾರು ಮಾಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರಿಂದ ಧರ್ಮದೇಟು ತಿಂದಿರುವ ಈ ವ್ಯಕ್ತಿಗಲ್ಲಿ ಕೆಲವರು ನಿಧಿಶೋಧ ಮಾಡುವವರು ಎಂದು ಹೇಳಿದರೆ ಇನ್ನು ಕೆಲವರು ಬದಾಮಿ ಪ್ರವಾಸಕ್ಕೆ ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ, ವಾಹನದಲ್ಲಿರುವ ಮಾರಕಾಸ್ತ್ರಗಳ ಬಗ್ಗೆ ಗ್ರಾಮಸ್ಥರು ಕೇಳಿದರೆ ಆಟ ಆಡಲು ತಂದಿರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
 
ಆದರೆ ಅವರು ಹೊಂದಿರುವ ಮಾರಕಾಸ್ತ್ರಗಳನ್ನು ನೋಡಿದರೆ ಅಪಾಯದ ಸೂಚನೆ ಕಾಣುತ್ತಿತ್ತು ಎಂದು ಸ್ಥಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಕನಕಪ್ಪ ಬಾವಂಜಿ, ಮಹಾಂತೇಶ ಶೆಟ್ಟರ್, ಶಂಕ್ರಪ್ಪ ಗುಜ್ಜಲ, ಶ್ರೀಶೈಲಪ್ಪ ಇಲಚಿ ಮುಂತಾದವರು ತಿಳಿಸಿದರು. ಸುದ್ದಿ ಹರಡುತ್ತಿದ್ದಂತೆ ಜಮಾಯಿಸಿದ ಸಾರ್ವಜನಿಕರು ಆರೋಪಿಗಳ ವಾಹನವನ್ನು ನುಜ್ಜುಗುಜ್ಜು ಮಾಡಿ ಅಕ್ರೋಶ ವ್ಯಕ್ತಪಡಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ ಸಿಬ್ಬಂದಿ ಕೊಪ್ಪಳ ಗವಿಸಿದ್ದೇಶ್ವರ ಜಾತ್ರಾ ಬಂದೋಬಸ್ತಿಗಾಗಿ ಹೋಗಿದ್ದರಿಂದ ಠಾಣೆಯಲ್ಲಿ ಇದ್ದ ಕೆಲ ಸಿಬ್ಬಂದಿ ಜೊತೆಗೆ ಹನುಮಸಾಗರ ಸಹಾಯಕ ಪೊಲೀಸ್ ಸಬ್ ಇನಸ್ಪೆಕ್ಟರ್ ಶೇಕ್‌ಮಹಿಬೂಬ ಸ್ಳಳಕ್ಕೆ ಭೇಟಿ ನೀಡಿ ಜನರನ್ನು ನಿಯಂತ್ರಿಸಲು ಪ್ರಯತ್ನಿಸಿದರು.

ಹೊರಗಡೆ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿ ಪರಸ್ಥಿತಿ ಕೈಮೀರಿ ಹೋಗುತ್ತಿದ್ದುದನ್ನು ಗಮನಿಸಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಹೆಚ್ಚಿನ ಸಿಬ್ಬಂದಿಗಾಗಿ ಕೋರಿದ್ದಾರೆ.

ಜಿಲ್ಲಾ ಪೊಲೀಸ ವರಿಷ್ಠಾಧಿಕಾರಗಳ ಮಾರ್ಗದರ್ಶನದ ಮೇರೆಗೆ ಸಮೀಪದ ಬದಾಮಿ ಸಿಪಿಐ, ಗಜೇಂದ್ರಗಡ ಪಿಎಸ್‌ಐ ಹಾಗೂ ಸಿಬ್ಬಂದಿ ಹಾಜರಾಗಿ ಪರಸ್ಥಿತಿ ನಿಯಂತ್ರಿಸಿದರು.

ನಂತರ ಆಗಮಿಸಿದ ಸರ್ಕಲ್ ಇನಸ್ಪೆಕ್ಟರ್ ನೀಲಪ್ಪ ಓಲೇಕಾರ, ಹನುಮಸಾಗರ ಪೊಲೀಸ್ ಸಬ್‌ಇನಸ್ಪೆಕ್ಟರ್ ಮೌನೇಶ್ವರ ಸಿಬ್ಬಂದಿಯೊಂದಿಗೆ ಆರೋಪಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.