ADVERTISEMENT

ಶಿಕ್ಷಣಕ್ಕಾಗಿ ಶಕ್ತಿಯನ್ನು ಒಟ್ಟುಗೂಡಿಸಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2011, 8:30 IST
Last Updated 24 ಜೂನ್ 2011, 8:30 IST
ಶಿಕ್ಷಣಕ್ಕಾಗಿ ಶಕ್ತಿಯನ್ನು ಒಟ್ಟುಗೂಡಿಸಿ
ಶಿಕ್ಷಣಕ್ಕಾಗಿ ಶಕ್ತಿಯನ್ನು ಒಟ್ಟುಗೂಡಿಸಿ   

ಹನುಮಸಾಗರ: ಕ್ಷತ್ರಿಯ ಸಮಾಜ ಅಗಾಧವಾದ ಶಕ್ತಿಯನ್ನು ಹೊಂದಿದ್ದು ಆ ಶಕ್ತಿಯನ್ನು ಶಿಕ್ಷಣಕ್ಕಾಗಿ ಧಾರೆ ಎರೆದರೆ ಮಾತ್ರ ಅದರಿಂದ ಸಮಾಜ ನೂರ‌್ಮಡಿಯಾಗಿ ಬೆಳೆಯಲು ಸಾಧ್ಯ ಎಂದು ಅಖಿಲ ಭಾರತ ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ಶ್ರೀಹರಿ ಖೋಡೆ ಹೇಳಿದರು.

ಗುರುವಾರ ಇಲ್ಲಿನ ಶ್ರೀಅಂಬಾಭವಾನಿದೇವಿ ಮೂರ್ತಿ ಪ್ರತಿಷ್ಠಾಪನೆಯ 74ನೇ ವಾರ್ಷಿಕೋತ್ಸವದ ನಿಮಿತ್ತವಾಗಿ ಸ್ಥಳೀಯ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ವಿಶ್ವಸ್ಥ ಮಂಡಳಿಯ ಪರವಾಗಿ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ಉಪನಯನ ಹಾಗೂ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಬಗ್ಗೆ ಅಭಿಮಾನದಿಂದ ಹೇಳುವ ನಾವು ಸಮಾಜ ಮುಖಿಯಾಗಿ ಬೆಳೆದರೆ ಮಾತ್ರ ನಾವು ಸಮಾಜದ ವೃಣ ತೀರಿಸಿದಂತಾಗುತ್ತದೆ, ಕೇವಲ ಸಣ್ಣಪುಟ್ಟ ಉದ್ಯೋಗಕ್ಕೆ ನಾವು ಮೀಸಲಾಗದೇ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕಾದದ್ದು ಅವಶ್ಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿ ಸಂಘಟನೆ, ಸಹಬಾಳ್ವೆ, ಶಿಕ್ಷಣ, ಸ್ವಾಲಂಬಿ ಬದುಕು ಹಾಗೂ ಸ್ವಾಭಿಮಾನಗಳನ್ನು ಮೈಗೂಡಿಸಿಕೊಂಡಿದ್ದರೆ ಮಾತ್ರ ವ್ಯಕ್ತಿ ಮುಂದೆ ಬರಲು ಸಾಧ್ಯ ಎಂದು ಹೇಳಿದರು. ನಂತರ ಶ್ರೀವಿಜಯ ಮಹಾಂತ ಶಿವಯೋಗಿಗಳು, ಆಶೀರ್ವಚನ ನೀಡಿದರು. 46 ವಟುಗಳಿಗೆ ಉಪನಯನ ಹಾಗೂ 16ಜೋಡಿ ವಧು ವರರು ಹೊಸ ಬಾಳಿಗೆ ಕಾಲಿಟ್ಟರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಮಾಜದ ಗಣ್ಯರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯೆ ಲಕ್ಷ್ಮೀದೇವಿ ಹಳ್ಳೂರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಮ್ಮ ಹಕ್ಕಿ, ಉಪಾಧ್ಯಕ್ಷ ಪ್ರಹ್ಲಾದ ಕಟ್ಟಿ, ಶೇಖರಗೌಡ ಮಾಲಿಪಾಟೀಲ, ಸಂಗಯ್ಯ ವಸ್ತ್ರದ, ಸಕ್ರಪ್ಪ ಬಿಂಗಿ, ಬಸವರಾಜ ಹಳ್ಳೂರ, ಎಚ್.ಎನ್.ಬಡಿಗೇರ, ರಘುನಾಥಸಾ ಪವಾರ, ಕೃಷ್ಣಮುರ್ತಿ ರಂಗ್ರೇಜಿ, ಬಸವರಾಜ ಪಾಟೀಲ, ಶಿವಣಸಾ ಮೆಹರವಾಡೆ, ರಾಘವೇಂದ್ರಸಾ ರಾಯಬಾಗಿ, ಲಕ್ಷ್ಮೀಕಾಂತಸಾ ನಗಾರಿ, ಕಳಕೂಸಾ ರಾಯಬಾಗಿ, ಪರಶುರಾಮಸಾ ಪವಾರ, ಹನುಮಂತಸಾ ಬಸ್ವಾ, ವೆಂಕೂಸಾ ಸಿಂಗ್ರಿ, ಸುರೇಂದ್ರಸಾ ರಾಯಬಾಗಿ, ಭವಾನಿಸಾ ಪಾಟೀಲ, ಜ್ಯೋತಿಬಾ ರಂಗ್ರೇಜಿ ಇತರರು ಕಾರ್ಯಕ್ರಮದಲ್ಲಿ ಇದ್ದರು.

ಅಮೃತಾ ಮಲಜಿ ಪ್ರಾರ್ಥಿಸಿದರು. ನಾಗೂಸಾ ನಿರಂಜನ ಸ್ವಾಗತಿಸಿದರು. ಭಗೀರಥಸಾ ಪಾಟೀಲ, ಹನುಮಂತಸಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.