ADVERTISEMENT

`ಸಂಪ್ರದಾಯ ಮೆಟ್ಟಿ ನಿಂತ ಮಹಿಳೆ'

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 8:47 IST
Last Updated 22 ಡಿಸೆಂಬರ್ 2012, 8:47 IST

ಕನಕಗಿರಿ: ಗ್ರಾಮೀಣ ಪ್ರದೇಶದ ಮಹಿಳೆಯರು ಸಂಪ್ರದಾಯ, ಕಂದಾಚಾರಗಳು ಹಾಗೂ ಮನೆ ಜವಾಬ್ದಾರಿ ಮಧ್ಯೆಯೂ ಆತ್ಮವಿಶ್ವಾಸದಿಂದ ಸ್ವಸಹಾಯ ಗುಂಪುಗಳನ್ನು ರಚಿಸಿಕೊಂಡು ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಿರುವದು ತಮಗೆ ಸಂತಸ ತಂದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಾದೇಶಿಕ ನಿರ್ದೇಶಕಿ ಉಮಾಶಂಕರ ತಿಳಿಸಿದರು.

ಇಲ್ಲಿನ ಸಮೂಹ ಸಂಸ್ಥೆಯ ಆವರಣದಲ್ಲಿ ಶುಕ್ರವಾರ ಪ್ರಗತಿ ಗ್ರಾಮೀಣ ಬ್ಯಾಂಕ್ ಹಾಗೂ ಸಮೂಹ ಸಂಸ್ಥೆ ಆಶ್ರಯದಲ್ಲಿ ನಡೆದ ಸ್ವಸಹಾಯ ಗುಂಪುಗಳಿಗೆ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಸರ್ಕಾರದ ಯೋಜನೆಗಳ ಲಾಭ ಸಮರ್ಪಕವಾಗಿ ಜನತೆಗೆ ಮುಟ್ಟುತ್ತಿಲ್ಲ, ಇಂಥ ಸಮಯದಲ್ಲಿ ಸರ್ಕಾರ ಹಾಗೂ ಜನತೆಯ ನಡುವೆ ಸಮೂಹ ಸಂಸ್ಥೆ ಕೊಂಡಿಯಾಗಿ ಸಮೂಹ ಸಂಸ್ಥೆ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಭಾರತೀಯ ಮಹಿಳೆಗೆ ಸಮಾಜವನ್ನು ಸಶಕ್ತವಾಗಿ ಕಟ್ಟುವ, ಪೋಷಿಸುವ ಹಾಗೂ ಬದಲಾಯಿಸುವ ಶಕ್ತಿ ಹೊಂದಿದ್ದು ಮೂಢನಂಬಿಕೆ, ಧಾರ್ಮಿಕತೆಯಿಂದ ಹೊರ ಬಂದು ನವ ಸಮಾಜ ನಿರ್ಮಿಸಬೇಕೆಂದು ಅವರು ಕರೆ ನೀಡಿದರು.

ಕೆನರಾ ಬ್ಯಾಂಕ್‌ನ ಮಹಾ ಪ್ರಬಂಧಕ ಕೆ. ಎಸ್. ಪ್ರಭಾಕರ ಮಾತನಾಡಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಬ್ಯಾಂಕ್ ಸಹಾಯಕವಾಗಿದ್ದು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಅವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಿದರು.

ಸಮೂಹ ಸಂಸ್ಥೆಯ ನಿರ್ದೇಶಕ ಎಂ. ನಾರಾಯಣಸ್ವಾಮಿ ಮಾತನಾಡಿ ಸಮೂಹ ಸಂಸ್ಥೆಯ ಆರಂಭ, ಉದ್ದೇಶಗಳ ಕುರಿತು ತಿಳಿಸಿದರು. ಪ್ರಗತಿ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಎಂ. ಜಿ. ಭಟ್ ಮಾತನಾಡಿದರು.

ಇದೇ ಸಮಯದಲ್ಲಿ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಆಯ್ದ ಬ್ಯಾಂಕ್ ಶಾಖೆಗಳಿಂದ 500 ಸ್ವಸಹಾಯ ಗುಂಪುಗಳಿಗೆ ಸಾಲ ವಿತರಣೆ ಹಾಗೂ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಣೆ ಮಾಡಲಾಯಿತು.

ಪ್ರಗತಿ ಹಾಗೂ ಕೆನರಾ ಬ್ಯಾಂಕ್‌ಗಳ ಅಧಿಕಾರಿಗಳಾದ ಬಿ. ರಾಜಶೇಖರಪ್ಪ, ಎಂ. ನಾಗರಾಜ, ಕುಂಸಿ ಬಾಬು, ಎ. ನಾರಾಯಣ,  ಆರ್. ಅಲ್, ಆಚಾರ್ಯ, ಎ. ವಿ. ಸುಬ್ಬಾರಾವ್, ಸಮೂಹ ಸಂಸ್ಥೆಯ  ಎಸ್. ಶಿವಕುಮಾರಸ್ವಾಮಿ, ನಬಾರ್ಡ್‌ನ ಯೋಗೇಶ ಸ್ವಸಹಾಯ ಗುಂಪುಗಳ ಅಧ್ಯಕ್ಷರಾದ ದೇವಮ್ಮ, ಬಸಮ್ಮ ಇತರರು ಹಾಜರಿದ್ದರು. ಉಷಾ ಸಂಗಡಿಗರು ಪ್ರಾರ್ಥಿಸಿದರು. ಎಂ. ಜಿ. ಸ್ವಾಗತಿಸಿದರು. ವಿಠ್ಠಲರಾವ್ ನಿರೂಪಿಸಿದರು. ನಾಗರಾಜ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.