ADVERTISEMENT

ಸಿಎಂಗೆ ವಾಮಾಚಾರದ ಭಯ: ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 8:35 IST
Last Updated 5 ಫೆಬ್ರುವರಿ 2011, 8:35 IST

ಕುಷ್ಟಗಿ: ವಾಮಾಚಾರ, ಮಾಟ ಮಂತ್ರದ ನಂಬಿಕೆಯಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರ ಬಜೆಟ್‌ಗೆ ಮೊದಲೇ ರಾಜ್ಯ ಬಜೆಟ್ ಮಂಡನೆಗೆ ಮುಂದಾಗಿದ್ದಾರೆ ಎಂದು ಬೆಂಗಳೂರು ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಶುಕ್ರವಾರ ಇಲ್ಲಿ ಹೇಳಿದರು.ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಮುಂಚಿತವಾಗಿಯೇ ಬಜೆಟ್ ಮಂಡನೆ ಮಾಡುವುದರ ಹಿಂದೆ ಮುಖ್ಯಮಂತ್ರಿಯವರಿಗೆ ವಿಧಾನಸಭೆಯ ಅಕಾಲಿಕ ಚುನಾವಣೆ ಭಯವೂ ಇರುವಂತಿದೆ ಎಂದರು.

 ಕೃಷಿ ವಲದಲ್ಲಿ ಕೇವಲ ವ್ಯಯ ಮಾತ್ರ ಇರುತ್ತದೆ ಸರ್ಕಾರ ಆದಾಯ ನಿರೀಕ್ಷಿಸುವಂತೆಯೇ ಇಲ್ಲ ಹಾಗಿದ್ದರೂ ಈ ಬಾರಿ ವಿಶೇಷವಾಗಿ ಕೃಷಿ ಬಜೆಟ್ ಮಂಡಿಸುವುದಾಗಿ ಮುಖ್ಯಮಂತ್ರಿ ಹೇಳಿರುವುದು ಜನರನ್ನು ದಾರಿ ತಪ್ಪಿಸುವುದ ತಂತ್ರ ಎಂದರು. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ನೀರಾವರಿ, ಗ್ರಾಮೀಣ ಅಭಿವೃದ್ಧಿ ಅನುದಾನವನ್ನು ಕಡಿತಗೊಳಿಸಿದೆ ಎಂದ ಅವರು, ರೈತರಿಗೆ, ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವಂತಿದ್ದರೆ ಅದನ್ನು ಬಜೆಟ್‌ನಲ್ಲಿ ನೀಡಬೇಕು ಅದನ್ನು ಬಿಟ್ಟು ಕೃಷಿ ಬಜೆಟ್ ಮಂಡಿಸಲು ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ ಎಂದರು.

 ಈ ಸಂದರ್ಭದಲ್ಲಿ ಹಾಜರಿದ್ದ ಕಲಘಟಗಿ ಶಾಸಕ ಸಂತೋಷ ಲಾಡ್, ‘ಮುಖ್ಯಮಂತ್ರಿ ಯಡಿಯೂರಪ್ಪ ಇತಿಹಾಸ ಪುರಷರಾಗಿದ್ದಾರೆ ಅವರು ಏನು ಮಾಡಿದರೂ ನಡೆಯುತ್ತದೆ ಆದರೆ 2ಜಿ ತರಂಗಾಂತರ ಹಂಚಿಕೆ ಸಂಬಂಧ ಯು.ಪಿ.ಎ ಸರ್ಕಾರ ತಡಮಾಡದೇ ಕ್ರಮ ತೆಗೆದುಕೊಂಡಿದ್ದರೂ ಭೂ ಹಗರಣಗಳ ಬಗ್ಗೆ ಗಮನಹರಿಸದ ಬಿಜೆಪಿ ಕೇಂದ್ರ ಸರ್ಕಾರದ ಕಡೆಗೆ ಬೆರಳು ತೋರಿಸುವ ಮೂಲಕ ಸಂವೇದನಾ ರಹಿತ ಸರ್ಕಾರ ಎಂಬುದನ್ನು ಸಾಬೀತುಪಡಿಸಿದೆ ಎಂದರು.

2ಜಿ ಸ್ಪೆಕ್ಟ್ರಂ ಹಗರಣ ಕುರಿತು ವಿವರಿಸಿದ ದಿನೇಶ ಗುಂಡೂರಾವ್ ಇದರಲ್ಲಿ ಯಾರನ್ನೂ ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲ, ಆರೋಪ ಬಂದ ತಕ್ಷಣ ಸಚಿವ ಎ.ರಾಜಾ ಅವರು ರಾಜೀನಾಮೆ ನೀಡಿದರು. ಈಗಾಗಲೇ ಸಿ.ಬಿ.ಐ ಅವರನ್ನು ಬಂಧಿಸಿದೆ, ವಸತಿ ಕಾಮಗಾರಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ತಕ್ಷಣ ರಾಜೀನಾಮೆ ನೀಡಿದರು.

ಅದೇ ರೀತಿ ನಟವರಸಿಂಗ್, ಶಶಿ ತರೂರ್ ಸಹ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು.ಬಿಜೆಪಿ ಆರೋಪ ಏನೇ ಇದ್ದರೂ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂಬುದು ಕಾಂಗ್ರೆಸ್ ಸಿದ್ಧಾಂತ ಎಂದರು.ಭೂ ಹಗರಣವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಸ್ವತಃ ಒಪ್ಪಿಕೊಂಡಿದ್ದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿದ್ದರೂ  ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಕ್ಕೆ ಅಂಟಿಕೊಂಡಿರುವುದು ಅನೈತಿಕತೆಯ ಪರಮಾವಧಿ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.
ಶಾಸಕ ಅಮರೇಗೌಡ ಬಯ್ಯಾಪೂರ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.