ADVERTISEMENT

`ಸ್ಲಂ: ಜ.10ರೊಳಗೆ ಹಕ್ಕು ಪತ್ರ'

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 8:26 IST
Last Updated 15 ಡಿಸೆಂಬರ್ 2012, 8:26 IST

ಗಂಗಾವತಿ:  ಮುಂದಿನ ಜ.10ರೊಳಗೆ ರಾಜ್ಯದ ಎಲ್ಲ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಬಡ ಜನರಿಗೆ ಹಕ್ಕುಪತ್ರ ವಿತರಣೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತರುವುದಾಗಿ ಬಿಜೆಪಿಯ ರಾಜ್ಯ ಸ್ಲಂ ಮೋರ್ಚಾದ ಅಧ್ಯಕ್ಷ ಮಾರುತಿರಾವ್ ಪವಾರ ಹೇಳಿದರು.

ಶುಕ್ರವಾರ ನಗರದ ಭಾರತೀಯ ವೈದ್ಯಕೀಯ ಭವನದಲ್ಲಿ ನಡೆದ ರಾಯಚೂರು-ಕೊಪ್ಪಳ-ಬಳ್ಳಾರಿ ಜಿಲ್ಲೆಗಳ ವಿಭಾಗಮಟ್ಟದ ಭಾರತೀಯ ಜನತಾ ಪಾರ್ಟಿಯ ಸ್ಲಂ ಮೊರ್ಚಾದ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ಐದು ದಶಕಗಳ ಕಾಲ ಅಧಿಕಾರ ನಡೆಸಿದ ಯಾವ ಸರ್ಕಾರವೂ ಕೊಳಚೆ ಪ್ರದೇಶದ ಅಭಿವೃದ್ಧಿಗೆ ಒಂದು ಲಕ್ಷ ರೂಪಾಯಿ ನೀಡಿರಲಿಲ್ಲ. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 75 ಕೋಟಿ ರೂಪಾಯಿ ನೀಡಿದೆ.

ಆದರೆ ಈ 75 ಕೋಟಿ ರೂಪಾಯಿ ಸ್ಲಂಗಳ ಅಭಿವೃದ್ಧಿಗೆ ಸಾಲದು ಎಂದು ಸ್ಲಂ ಮೋರ್ಚಾದ ಪದಾಧಿಕಾರಿಗಳು 200 ಕೋಟಿ ಹಣ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ರಾಜ್ಯದ ಸಮಗ್ರ ಅಭಿವೃದ್ಧಿ ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.

ಡಿ.9ರವರೆಗೆ ಬಿಜೆಪಿ ಪಕ್ಷಕಟ್ಟುವ ಸಂಬಂಧ ಆತಂಕ ಕವಿದಿತ್ತು. ಆದರೆ ಕೆಜೆಪಿ ಅಸ್ತಿತ್ವದಿಂದ ಬಿಜೆಪಿಗೆ ಯಾವ ದಕ್ಕೆ ಇಲ್ಲ ಎಂಬುವುದು ಈಗಾಗಲೆ ಸಾಬೀತಾಗಿದೆ.ಯಾವುದೇ ವ್ಯಕ್ತಿ ಪಕ್ಷ ಬಿಟ್ಟು ಹೋದ ಮಾತ್ರಕ್ಕೆ ಪಕ್ಷ ಅವರಿಂದ ಹೋಗುವುದಿಲ್ಲ' ಎಂದು ಪರೋಕ್ಷವಾಗಿ ಬಿಎಸ್‌ವೈ ಬಗ್ಗೆ ಕಿಡಿ ಕಾರಿದರು.

ಇನ್ನಷ್ಟು ಸದೃಢವಾಗಿ ಪಕ್ಷವನ್ನು ಕಟ್ಟಿ ಬೆಳೆಸುವ ನಿಷ್ಠಾವಂತ ಕಾರ್ಯಕರ್ತರ ಪಡೆ ಬಿಜೆಪಿಗೆ ಇದೆ. ತತ್ವ ಸಿದ್ದಾಂತಕ್ಕೆ ಇಲ್ಲಿ ಆದ್ಯತೆಯೆ ಹೊರತು ವ್ಯಕ್ತಿ ನಿಷ್ಠೆಗೆ ಅಲ್ಲ. ಅವರಿವರು ಪಕ್ಷ ಬಿಟ್ಟು ಹೋದರು ಎಂಬ ವದಂತಿಗಳಿಗೆ ಕಾರ್ಯಕರ್ತರು ಕಿವಿಗೊಡದಿರುವಂತೆ ಪವಾರ ಮನವಿ ಮಾಡಿದರು.

ಕಾರ್ಯಕ್ರಮ ಉದ್ದೇಶಿಸಿ ಶಾಸಕ ಪರಣ್ಣ ಮುನವಳ್ಳಿ, ಬಳ್ಳಾರಿ ಮಹಾನಗರ ಪಾಲಿಕೆಯ ಸದಸ್ಯ ಎ.ಎಂ. ಸಂಜಯ್, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ, ಸ್ಲಂ ಮೋರ್ಚಾದ ರಾಜ್ಯ ಕಾರ್ಯದರ್ಶಿ ರಾಮಾನಾಯ್ಕ ಇತರರು ಮಾತನಾಡಿದರು.

ಈ ಸಂದರ್ಭದಲ್ಲಿ ಕೊಳಗೇರಿ ಅಭಿವೃದ್ಧಿ ನಿಗಮದ ಸದಸ್ಯ ಮುಜಮಿಲ್ ಅಹಮ್ಮದ್ ಬಾಬು, ಕಾರ್ಯದರ್ಶಿ ಶಿಂಧೆ, ಸ್ಥಳೀಯರಾದ ಪ್ರಭಾಕರ ವಕೀಲ, ಚೌಡ್ಕಿ ಹನುಮಂತಪ್ಪ, ಶೇಷರಾವ್, ಶಾಂತ, ಸುಜಾತ, ಜಟ್ಟಿ ವೀರಪ್ರಸಾದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.