ADVERTISEMENT

ಹಣ ದುರ್ಬಳಕೆ: ಪ್ರತಿಕೃತಿ ದಹನ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 8:40 IST
Last Updated 11 ಡಿಸೆಂಬರ್ 2013, 8:40 IST

ಗಂಗಾವತಿ: ಕಾರ್ಮಿಕ ಇಲಾಖೆಯಲ್ಲಿನ ಕಾರ್ಮಿಕರ ಕಲ್ಯಾಣ ನಿಧಿಯನ್ನು ಇಲಾಖೆ ಸಚಿವ ಪರಮೇಶ್ವರ ನಾಯಕ ದುರ್ಬಳಕೆ ಮಾಡಲು ಯತ್ನಿಸು­ತ್ತಿದ್ದಾರೆ ಎಂದು ಆರೋಪಿಸಿ ಎಐಸಿಸಿಟಿಯು ಸಂಘಟನೆಯ ಕಾರ್ಯ­ಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಬಳಿಕ ಸಚಿವರ ಪ್ರತಿಕೃತಿ ದಹಿಸಿದರು.

ಆನೆಗೊಂದಿ ರಸ್ತೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಮೀಪದ ಎಐಸಿಸಿಟಿಯುನ ಕೊಪ್ಪಳ ಜಿಲ್ಲಾ ಕಾರ್ಯಾಲಯದಿಂದ ಮೆರವಣಿಗೆ ಮೂಲಕ ಆಗಮಿಸಿದ ಧರಣಿಕಾರರು ಬಳಿಕ ಕೃಷ್ಣದೇವರಾಯ ವೃತ್ತದಲ್ಲಿ ಸಚಿವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ಉದ್ದೇಶಿಸಿ ಮಾತನಾ­ಡಿದ ಟಿ. ರಾಘವೇಂದ್ರ, ನ. 21ರಂದು ವಿಧಾನಸೌದದಲ್ಲಿ ಕಾರ್ಮಿಕ ಸಚಿವ ಪರಮೇಶ್ವರ ನೇತೃತ್ವದಲ್ಲಿ ನಡೆದ ಕಟ್ಟಡ ಕಾರ್ಮಿಕ ಸಂಘಟನೆಗಳ  ಮುಖ್ಯಸ್ಥರ ಸಭೆಯಲ್ಲಿ ಕಾರ್ಮಿಕರ ತೆರಿಗೆ ಹಣವನ್ನು ಬೇರೆ ಉದ್ದೇಶಕ್ಕೆ ಉಪಯೋಗಿಸಬಾರದು ಎಂದು ಒತ್ತಾಯಿಸಲಾಗಿತ್ತು.

ಆದರೆ ಸಚಿವರು ಕಾರ್ಮಿಕರ ಹಣ­ವನ್ನು ಬೇರೆ ಕಾರ್ಯಕ್ಕೆ ಬಳಸುವ ಸಂಬಂಧಿಸಿದಂತೆ ಕಾರ್ಮಿಕ ಸಂಘಟನೆ­ಗಳ ಮೇಲೆ ಉಸ್ತುವಾರಿ ಎಂಬಂತೆ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ ನಾಲ್ವರನ್ನು ನಿಯೋಜಿಸಿರುವುದು ಕಾರ್ಮಿಕರಿಗೆ ಮಾಡುತ್ತಿರುವ ಅನ್ಯಾಯ ಎಂದು ಆರೋಪಿಸಿದರು.

ಕಾರ್ಮಿಕ ಕಲ್ಯಾಣ ಮಂಡಳಿಯಿಂದ ರೂಪಿಸಿದ 12 ಸವಲತ್ತು ಹೊರತು ಪಡಿಸಿ ಬೇರೆ ಉದ್ದೇಶಕ್ಕೆ ಹಣ ಬಳಸಬಾ­ರದು, ಮಂಡಳಿಗೆ ಕಾರ್ಮಿಕ ಸಂಘಟನೆ­ಗಳ ಮುಖಂಡರನ್ನೆ ನೇಮಿಸಬೇಕು, ತಾಲ್ಲೂಕಿನಲ್ಲಿ ಕಾರ್ಮಿಕರ ಕಾಲೊನಿ ನಿರ್ಮಿಸಬೇಕೆಂಬ ಇನ್ನಿತರ ಬೇಡಿಕೆಯ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು.

ಹಿರಿಯ ಕಾರ್ಮಿಕ ಮುಖಂಡ ಜೆ. ಭಾರದ್ವಾಜ್‌ ನೇತೃತ್ವ ವಹಿಸಿದ್ದರು. ಎಐಸಿಸಿಟಿಯು, ಪಿಡಬ್ಲೂಪಿಎಸ್‌, ಸಿಪಿಐಎಂಎಲ್‌, ಎಐಎಎಲ್‌ಎ ಸಂಘಟ­ನೆಗಳ ಪ್ರಮುಖರಾದ ಬಸವನಗೌಡ, ಎಂ. ಏಸಪ್ಪ, ಎಂ. ವಿರೂಪಾಕ್ಷಪ್ಪ, ಜಹಾಂಗೀರ್‌ಪಾಷಾ, ಖಾದರ್‌­ಭಾಷಾ, ಬೆಟ್ಟದೇಶ, ಮಂಜುನಾಥ, ರಮೇಶ, ಮಲ್ಲಪ್ಪ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.