ಕಾರಟಗಿ: ತೋಟಗಾರಿಕೆ ಹಾಗೂ ಭತ್ತದ ಬೆಳೆ ಸೇರಿದಂತೆ ಕಳೆದ ಮಂಗಳವಾರದಿಂದ ಆರಂಭಗೊಂಡಿರುವ ಅಕಾಲಿಕ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿರುವುದು ಇಂದು ಪರಿಶೀಲಿಸಿದ ಬಳಿಕ ಗಮನಕ್ಕೆ ಬಂದಿದೆ.
ಪರಿಶೀಲನೆಯ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ, ಅಗತ್ಯ ಪರಿಹಾರಕ್ಕೆ ಶಿಫಾರಸು ಮಾಡುವೆ. ಪರಿಹಾರದ ಪ್ರಮಾಣವನ್ನು ಜಿಲ್ಲಾಧಿಕಾರಿಗಳೆ ನಿರ್ಧರಿಸಲಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ರಾಜಾರಾಂ ಹೇಳಿದರು.
ಶುಕ್ರವಾರ ಬೇವಿನಾಳ ಗ್ರಾಪಂ ವ್ಯಾಪ್ತಿಯ ಪನ್ನಾಪೂರ, ಬಸವಣ್ಣಕ್ಯಾಂಪ್ನಲ್ಲಿ ಕಳೆದ ಮಂಗಳವಾರ ಸುರಿದ ಬಿರುಗಾಳಿಯುಕ್ತ ಆಲಿಕಲ್ಲು ಮಳೆಗೆ ನಷ್ಟಕ್ಕೊಳಗಾದ ಭತ್ತದ ಬೆಳೆಯ ವೀಕ್ಷಣೆಯ ಬಳಿಕ `ಪ್ರಜಾವಾಣಿ~ಯೊಂದಿಗೆ ಮಾತನಾಡಿ, ವಾರ ಕಳೆದಿದ್ದರೆ ಬೆಳೆ ರೈತರ ಕೈಸೇರುತ್ತಿತ್ತು.
ಆದರೆ ಕೈಗೆ ಬಂದದ್ದು ಬಾಯಿಗೆ ಬಾರದಂತಾಯಿತು. ವಿಷಯ ನನ್ನ ವ್ಯಾಪ್ತಿಗೆ ಸಂಬಂಧಿಸಿದ್ದಲ್ಲದಿದ್ದರೂ, ಮಾನವೀಯತೆಯ ದೃಷ್ಟಿಯಿಂದ ಹಾಗೂ ಜಿಪಂ ಅಧ್ಯಕ್ಷರ, ಡಿಸಿಯವರ ಸೂಚನೆಯ ಮೇರೆಗೆ ಆಗಮಿಸಿರುವೆ. ರೈತರಿಗಾದ ನಷ್ಟಕ್ಕೆ ನನ್ನದೂ ಅನುಕಂಪವಿದೆ. ಆದಷ್ಟು ಬೇಗ ಪರಿಹಾರ ದೊರೆಯುವಲ್ಲಿ ತಮ್ಮ ಒತ್ತಡ ಹಾಕುವುದಾಗಿ ಹೇಳಿದರು.
ಗಂಗಾವತಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಎನ್. ಮಠ ಬೆಳೆ ನಷ್ಟ ದುರಾದೃಷ್ಟಕರ. ವೀಕ್ಷಣೆಯ ಬಳಿಕ ಮೇಲಾಧಿಕಾರಿಗಳ ಗಮನಕ್ಕೆ ವಿಷಯ ತಂದು ಪರಿಹಾರ ದೊರಕಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಕುಡಿಯುವ ನೀಗೆ ಸಾಕಷ್ಟು ಹಣವಿದೆ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಲು ಜಿಲ್ಲಾಡಳಿತ ಸಿದ್ಧವಿದೆ. ಜಿಲ್ಲೆಗೆ 1. 20 ಕೋಟಿ ರೂ. ಹಣ ಮೀಸಲಿದೆ. ಪ್ರತಿ ತಾಲ್ಲೂಕಿಗೆ 30 ಲಕ್ಷ ರೂ. ಮೀಸಲಿಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಹೆಲ್ಪಲೈನ್, ತಾಲ್ಲೂಕು ಮಟ್ಟದಲ್ಲಿ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದೆ ಎಂದು ರಾಜಾರಾಂ ವಿವರಿಸಿದರು.
ಬಸ್ ಪ್ರಚಾರಕ್ಕೆ ಬಿಡಲಾಗಿದೆ. ಉಪಕರಣಗಳಿಲ್ಲ, ಸಮಸ್ಯೆಗೆ ಪರಿಹಾರ ದೊರೆಯುತ್ತಿಲ್ಲ ಎಂದು ಈಚೆಗೆ ಜಿಪಂ ಸದಸ್ಯ ವೀರೇಶ್ ಸಾಲೋಣಿ ಸೇರಿದಂತೆ ಇತರ ದೂರಿನ ಬಗ್ಗೆ ಗಮನ ಸೆಳೆದಾಗ ಯಾವುದೋ ಒಂದು ಸಂದರ್ಭದಲ್ಲಿ ಹಾಗಾಗಿರಬಹುದು. ಬಸ್ನಲ್ಲಿ ಎಲ್ಲಾ ಉಪಕರಣಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಕ್ರಮ, ಪರಿಹಾರಕ್ಕೆ ಆದ್ಯತೆ ನೀಡಲಾಗುತ್ತಿದೆ. ಜಿಲ್ಲೆಯ ಸಮಸ್ಯೆಗಳಿಗೆ ಸಾಕಷ್ಟು ಸ್ಪಂದಿಸಿ, ಪರಿಹಾರಕ್ಕೆ ಶ್ರಮಿಸಲಾಗುತ್ತಿದೆ ಎಂದರು.
ಬೇವಿನಾಳ ಗ್ರಾಪಂ ಅಧ್ಯಕ್ಷ ದೊಡ್ಡನಗೌಡ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪದ್ಮಾವತಿ ಕೊತ್ತಪಲ್ಲಿ, ಕೃಷಿ ಅಧಿಕಾರಿ ನಾಗರಾಜ್ ಸಜ್ಜನ್, ರಘುಪತಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ನಾಗೇಶ್ ಎಚ್, ಸುರೇಶ್, ತುಳುಜಾರಾಂ ಸಿಂಘಿ ್ರ ಮೊದಲಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.