ADVERTISEMENT

`ಹಿರೇಬೆಣಕಲ್: ಶೀಘ್ರವೇ ಪ್ರವಾಸಿ ತಾಣ'

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 9:40 IST
Last Updated 19 ಜುಲೈ 2013, 9:40 IST

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್ ಗ್ರಾಮವು ಶೀಘ್ರವೇ ಪ್ರವಾಸಿ ತಾಣವಾಗಿ ಮಾರ್ಪಡಲಿದೆ ಎಂದು ಸಂಸತ್ ಸದಸ್ಯ ಶಿವರಾಮಗೌಡ ಹೇಳಿದರು.

ಗುರುವಾರ ಗ್ರಾಮದಲ್ಲಿರುವ ಬೆಟ್ಟದ ಮೌರ್ಯರ ಕಾಲದ ಶಿಲಾ ಸ್ಮಾರಕಗಳನ್ನು ವೀಕ್ಷಿಸಿ ಮಾತನಾಡಿದ ಅವರು, ಈ ಸ್ಮಾರಕಗಳನ್ನು ವೀಕ್ಷಿಸಲು  ವಿದೇಶಿಯರೂ ಸೇರಿದಂತೆ ನೂರಾರು ಪ್ರವಾಸಿಗರು ಪ್ರತಿವರ್ಷ ಆಗಮಿಸುತ್ತ್ದ್ದಿದಾರೆ. ಇಲ್ಲಿ ಅವರಿಗೆ ಮೂಲಸೌಲಭ್ಯ ಒದಗಿಸಬೇಕು ಎಂದು  ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಅಧಿಕಾರಿ ವಿಠಲ ಆರ್. ಗೌಡ ಅವರಿಗೆ ಸೂಚಿಸಿದರು.

ಪ್ರವಾಸೋದ್ಯಮ ಇಲಾಖೆಯಿಂದ ಗ್ರಾಮದಿಂದ ಬೆಟ್ಟದವರೆಗಿನ ಭೂಮಿ ಸ್ವಾಧೀನಪಡಿಸಿಕೊಂಡು, ಮುಖ್ಯರಸ್ತೆಯಿಂದ ಬೆಟ್ಟದವರೆಗೆ 3 ಕಿ.ಮೀ. 30 ಅಡಿ ಕಾಂಕ್ರಿಟ್ ರಸ್ತೆ, 2 ಸೇತುವೆ, ಗ್ರಾಮದಲ್ಲಿ ಪ್ರವಾಸಿ ಮಾಹಿತಿ ಹಾಗೂ ತರಬೇತಿ ಕೇಂದ್ರ ನಿರ್ಮಾಣ,  ಕುಡಿಯುವ ನೀರು ಸರಬರಾಜು ಸೇರಿದಂತೆ ಇನ್ನಿತರ ಮೂಲಸೌಲಭ್ಯಗಳನ್ನು ಕಲ್ಪಿಸಲು ಅಗತ್ಯ ಯೋಜನೆ ರೂಪಿಸಿ ಪ್ರಸ್ತಾವ ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಸಂಸದ, ಹಿರೇಬೆಣಕಲ್ ಗ್ರಾಮದ ಸಂಪೂರ್ಣ ಅಭಿವೃದ್ಧಿಗೆ ಕ್ರಮವಹಿಸಲಾಗುವುದು. ಗ್ರಾಮದಲ್ಲಿ ವಿವಿಧ ಇಲಾಖೆಗಳಿಂದ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದ್ದು, ಸಂಸದರ ಅನುದಾನದಲ್ಲಿಯೂ ಕಾಮಗಾರಿ ನಡೆದಿದೆ. ವಸತಿ ಯೋಜನೆಗಳ ಸಮಸ್ಯೆಗೆ ತಕ್ಷಣ ಕ್ರಮ ಕೈಗೊಂಡು ಮಾಹಿತಿ ನೀಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.

ತುಂಗಭದ್ರಾ ಕಾಲುವೆಗೆ ಪಾದಚಾರಿ ಸೇತುವೆ ನಿರ್ಮಿಸಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಗ್ರಾಮದ ಬಸ್ ತಂಗುದಾಣದಲ್ಲಿ ಗಂಗಾವತಿ ಹಾಗೂ ಕೊಪ್ಪಳ ಘಟಕಗಳ ಬಸ್ ನಿಲುಗಡೆ ಮಾಡಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೊಪ್ಪಳದ ವಿಭಾಗೀಯ ನಿಯಂತ್ರಣಾಧಿಕಾರಿಗೆ ದೂರವಾಣಿ ಮೂಲಕ ಸೂಚಿಸಿದರು.

ಗಂಗಾವತಿಯ ಇತಿಹಾಸ ತಜ್ಞ ಡಾ.ಶರಣಬಸಪ್ಪ ಕೋಲ್ಕಾರ್, ಭಾರತೀಯ ಪುರಾತತ್ವ ಸಂರಕ್ಷಣಾ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ಪ್ರಮೋದ್, ಸಹಾಯಕ ಸಂರಕ್ಷಣಾಧಿಕಾರಿ ಕಷ್ಣಮೂರ್ತಿ, ಅರಣ್ಯ ಇಲಾಖೆಯ ವಲಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಯ್ಯ, ಶಿಕ್ಷಕ ಪ್ರಕಾಶ ಪಾಟೀಲ, ಚಂದ್ರಶೇಖರ ಹಣವಾಳ, ಸದರಿ ಸಂಸ್ಥೆಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಮಂಜುನಾಥ ಪತ್ತಾರ, ಸ್ಥಳೀಯ ಮುಖಂಡರಾದ ವೀರೇಶ ಅಂಗಡಿ, ಲಿಂಗಪ್ಪ ಮರದ, ಶರಣಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT