ADVERTISEMENT

‘ಮಾರ್ಗದರ್ಶನದ ಕೊರತೆ: ಗ್ರಾಮೀಣರ ಅಭಿವೃದ್ಧಿ ಹಿನ್ನಡೆ’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 6:56 IST
Last Updated 24 ಸೆಪ್ಟೆಂಬರ್ 2013, 6:56 IST

ಹನುಮಸಾಗರ: ಗ್ರಾಮಾಂತರ ಪ್ರದೇಶ­ದಲ್ಲಿ ಸಾಕಷ್ಟು ನೈಸರ್ಗಿಕ ಸಂಪತ್ತು ಇದೆ ಜೊತೆಗೆ ದುಡಿಯುವ ಹಂಬಲ ಹೊಂದಿದ  ಶ್ರಮಿಕರು ಇದ್ದಾರೆ, ಆದರೆ ಸರಿಯಾದ ಮಾರ್ಗದರ್ಶನದ ಕೊರತೆ­ಯಿಂದ ಗ್ರಾಮೀಣರು ಅಭಿವೃದ್ಧಿಯಾ­ಗಲು ಸಾಧ್ಯವಾಗುತ್ತಿಲ್ಲ ಎಂದು ಮುಖಂಡ ಎಂ.ಆರ್.ಪಾಟೀಲ ಅಭಿಪ್ರಾಯಪಟ್ಟರು.

ಸೋಮವಾರ ಸಮೀಪದ ಹೂಲ­ಗೇರಾ ಗ್ರಾಮದ ಗುಂಡಮಲ್ಲೇಶ್ವರ ಮಂಗಲ ಭವನದಲ್ಲಿ ಶ್ರೀಕ್ಷೇತ್ರ ಧರ್ಮ­ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ನಡೆದ ಸ್ವಸಹಾಯ ಸಂಘಗಳ ನೂತನ ಒಕ್ಕೂಟಗಳನ್ನು ಉದ್ಘಾಟಿಸಿ ಮಾತನಾಡಿದರು.

ಹಳ್ಳಿಗರು ಕೆಲಸ ಮಾಡುವ ಸ್ಥಳಕ್ಕೆ ಬಂದು ಅವರ ಕೌಶಲಕ್ಕೆ ಪೂರಕವಾ­ಗುವಂತಹ ಯೋಜನೆಗಳನ್ನು ಹಾಕಿ­ಕೊಂಡು, ಹಳ್ಳಿಗರ ಜೀವನಮಟ್ಟ ಸುಧಾ­ರಿ­ಸುವ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಕಿಕೊಂಡಿರುವುದು ಶ್ಲಾಘನೀಯ­ವಾದುದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ ರಾಠೋಡ ಮಾತನಾಡಿ, ಉದ್ಯೋಗ ಮಾಡುವ ಲವಲವಿಕೆ ಹೊಂದಿರುವವರಿಗೆ ಸದ್ಯ ಸಾಕಷ್ಟು ಯೋಜನೆಗಳಿವೆ, ಸಾಕಷ್ಟು ಅನುದಾ­ನವೂ ದೊರಕುತ್ತದೆ, ಅದಕ್ಕೆ ಪೂರಕ­ವಾಗಿ ಹಲವಾರು ಸಂಘ ಸಂಸ್ಥೆಗಳು ಸ್ವಸಹಾಯ ಸಂಘಗಳನ್ನು ರಚಿಸಿ ಕೃಷಿ, ಹೈನುಗಾರಿಕೆ, ಕೋಳಿ, ಕುರಿಸಾಕಾಣಿ­ಕೆಯಂತಹ ಉಪಕಸುಬುಗಳನ್ನು ಹಚ್ಚುವುದರ ಜೊತೆಗೆ ತರಬೇತಿ, ಹಣಕಾಸಿನ ನೆರವು ಸಹ ನೀಡುತ್ತಿವೆ ಸಾರ್ಜನಿಕರು ಇದರ ಸದುಪಯೋ­ಗಪಡಿಸಕೊಳ್ಳಬೇಕೆಂದು ಕರೆ ನೀಡಿದರು.

ಸಂಸ್ಥೆಯ ಯೋಜನಾಧಿಕಾರಿ ಸದಾ­ಶಿವ­ಗೌಡ, ತಮ್ಮ ಸಂಸ್ಥೆ ಹಾಕಿಕೊಂಡಿ­ರುವ ಕಾರ್ಯಕ್ರಮಗಳು ಅದರ ಲಾಭ ಕುರಿತಾಗಿ ಮಾತನಾಡಿದರು. ಚಳ­ಗೇರಿಯ ವಿರೂಪಾಕ್ಷಲಿಂಗ ಶಿವಾಚಾ­ರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಹೂಲಗೇರಾ, ಮನ್ನೇರಾಳ, ಕಾಟಾ­ಪುರ, ಕಬ್ಬರಗಿ ಕಾರ್ಯಕ್ಷೇತ್ರ­ಗಳಲ್ಲಿ ನೂತನವಾಗಿ ಸಂಘ­ಟಸಲ್ಪಟ್ಟಿರುವ ಪ್ರಗತಿಬಂಧು ಸ್ವಸ­ಹಾಯ ಸಂಘಗಳು ಉದ್ಘಾಟನೆ­ಗೊಂಡವು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹೊರಪೇಟಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸದಸ್ಯೆ ಕವಿತಾ ಪಾಟೀಲ, ವಿರೂಪಾಕ್ಷಗೌಡ ಪಾಟೀಲ, ಕಮಲಪ್ಪ ಜಾಲಿಹಾಳ, ಮುತ್ತಣ್ಣ ಕರಡಿ ಸೇರಿದಂತೆ  ಹೂಲಗೇರಾ, ಮನ್ನೇರಾಳ, ಕಾಟಾಪೂರ, ಕಬ್ಬರಗಿ ಗ್ರಾಮಗಳ ಸೇವಾ ಪ್ರತಿನಿಧಿಗಳು ಇದ್ದರು. ಸಂಸ್ಥೆಯ ಮೇಲ್ವಿಚಾರಕ ದೇವೇಂದ್ರ ಎಂ.ಎಚ್‌ ಸ್ವಾಗತಿಸಿದರು. ಆಂತರಿಕ ಲೆಕ್ಕ ಪರಿಶೋ­ಧಕ ಸಂತೋಷ ಪಿ.ಟಿ  ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.