ಕನಕಗಿರಿ (ಕೊಪ್ಪಳ ಜಿಲ್ಲೆ): ಕಲುಷಿತ ನೀರು ಸೇವನೆಯಿಂದಾಗಿ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಬಸರಿಹಾಳ ಗ್ರಾಮದ ಶ್ರುತಿ ಲಾಯದಣಸಿ ಎಂಬ ಒಂಬತ್ತು ತಿಂಗಳ ಮಗು ಮಂಗಳವಾರ ಮೃತಪಟ್ಟಿದೆ.
ಉರುಸ್ ನಿಮಿತ್ತ ಮಗು ಪೋಷಕರ ಜೊತೆ ತಾವರಗೇರಾಕ್ಕೆ ತೆರಳಿದ್ದಾಗ ಅಲ್ಲಿ ವಾಂತಿ ಹಾಗೂ ಭೇದಿ ಆಗಿ ಈ ಘಟನೆ ನಡೆದಿದೆ.
ಕಲುಷಿತ ನೀರು ಸೇವನೆಯಿಂದ ಬಸರಿಹಾಳ ಗ್ರಾಮದಲ್ಲಿ 9 ಜನ ವಾಂತಿ ಬೇಧಿಯಿಂದ ಬಳಲುತ್ತಿದ್ದು, ಅವರು ಕನಕಗಿರಿ, ಸಿಂಧನೂರು, ಗಂಗಾವತಿ ಹಾಗೂ ಮುಸಲಾಪುರದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಗ್ರಾಮದ ಶಾಲೆಯಲ್ಲಿ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ.
ಕನಕಗಿರಿ ತಹಶೀಲ್ದಾರ್ ಸಂಜಯ ಕಾಂಬ್ಳೆ, ತಾಲ್ಲೂಕು ಪಂಚಾಯಿತಿ ಪ್ರಭಾರ ಇಒ ಚಂದ್ರಶೇಖರ ಕಂದಕೂರು ಯಾರೂ ಕಲುಷಿತ ನೀರು ಕುಡಿಯಬಾರದು ಎಂದು ಗ್ರಾಮದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಇದೇ ಗ್ರಾಮದ ಹೊನ್ನಮ್ಮ ಶಿವಪ್ಪ ಎನ್ನುವ ಮಹಿಳೆ ಐದು ದಿನಗಳ ಹಿಂದೆ ಮೃತಪಟ್ಟಿದ್ದು, ಕಲುಷಿತ ನೀರು ಸೇವನೆ ಸಾವಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅಲಕನಂದಾ ಮಳಗಿ ಈ ಕುರಿತು ಪ್ರತಿಕ್ರಿಯಿಸಿ ಕಲುಷಿತ ನೀರಿನಿಂದಾಗಿ ಅವಘಡ ನಡೆದಿದ್ದು ಒಂಬತ್ತು ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.