ಕೊಪ್ಪಳ: ಇಲ್ಲಿನ ಬಹದ್ದೂರ್ ಬಂಡಿ ರಸ್ತೆಯ ವಾರ್ಡ್ ಸಂಖ್ಯೆ 3ರ ವ್ಯಾಪ್ತಿಯ ನಿರ್ಮಿತಿ ಕೇಂದ್ರದ ಬಳಿ ಭಾನುವಾರ ರಾತ್ರಿ ಯುವಕನೊಬ್ಬನನ್ನು ಲಾಂಗ್ನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಗವಿಸಿದ್ಧಪ್ಪ ನಾಯಕ (27)ನ ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕೊಲೆ ಮಾಡಿದ ಆರೋಪಿ ಸಾಧಿಕ್ ಹುಸೇನ್ ಕೋಲ್ಕಾರ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಜನ ಹೆಚ್ಚು ಸಂಖ್ಯೆಯಲ್ಲಿ ಓಡಾಡುವ ರಸ್ತೆ ಬದಿಯಲ್ಲಿಯೇ ಕೊಲೆ ನಡೆದಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.
ಕೊಪ್ಪಳದ ಕುರುಬರ ಓಣಿಯ ನಿವಾಸಿಯಾಗಿದ್ದ ಗವಿಸಿದ್ದಪ್ಪ ವೃತ್ತಿಯಲ್ಲಿ ಚಾಲಕನಾಗಿದ್ದ. ಮುಸ್ಲಿಂ ಸಮುದಾಯದ ಬಾಲಕಿಯೊಬ್ಬಳನ್ನು ಪ್ರೀತಿಸುತ್ತಿದ್ದ. ವಿಷಯ ಪಾಲಕರಿಗೆ ಹಿಂದೆಯೇ ತಿಳಿದಿದ್ದರಿಂದ ಎರಡೂ ಸಮಾಜಗಳ ಪ್ರಮುಖರು ಬುದ್ಧಿವಾದ ಹೇಳಿದ್ದರೂ ಕೇಳಿರಲಿಲ್ಲ. ಕೆಲವು ತಿಂಗಳ ಹಿಂದೆ ಪ್ರೇಮಿಗಳು ಓಡಿ ಹೋಗಿದ್ದರೂ ವಾಪಸ್ ಕರೆತಂದು ರಾಜೀ ಪಂಚಾಯಿತಿ ಮಾಡಿಸಲಾಗಿತ್ತು.
‘ಈ ವಿಷಯಕ್ಕಾಗಿಯೇ ಕೊಲೆ ನಡೆದಿದೆಯೇ ಅಥವಾ ಬೇರೆ ಕಾರಣವಿದೆಯೇ ಎನ್ನುವುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಾಗಿದೆ’ ಎಂದು ಯುವಕನ ಚಿಕ್ಕಪ್ಪ, ಕಾಂಗ್ರೆಸ್ ಮುಖಂಡ ಯಮನೂರಪ್ಪ ನಾಯಕ ಮಾಧ್ಯಮದವರಿಗೆ ತಿಳಿಸಿದರು.
ಸ್ಥಳೀಯರ ಮಾಹಿತಿ ಪ್ರಕಾರ ಮೂರ್ನಾಲ್ಕು ಜನ ಸೇರಿಯೇ ಕೊಲೆ ಮಾಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ನೇರವಾಗಿ ಕುತ್ತಿಗೆ ಭಾಗಕ್ಕೆ ಹೊಡೆದಿದ್ದರಿಂದ ಬಲವಾಗಿ ಪೆಟ್ಟು ಬಿದ್ದು ಮೃತಪಟ್ಟಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ, ಹೆಚ್ಚುವರಿ ಎಸ್.ಪಿ. ಹೇಮಂತಕುಮಾರ್, ನಗರಠಾಣೆ ಪೊಲೀಸ್ ಇನ್ಸ್ಟೆಕ್ಟರ್ ಜಯಪ್ರಕಾಶ ಸೇರಿದಂತೆ ಹಲವು ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ವದಂತಿಗೆ ಕಿವಿಗೊಡಬೇಡಿ: ಎಸ್.ಪಿ. ಮನವಿ
ಕೊಪ್ಪಳ: ಪ್ರೀತಿ ಪ್ರೇಮದ ವೈಯಕ್ತಿಕ ಕಾರಣಕ್ಕೆ ನಡೆದ ಕೊಲೆ ಇದಾಗಿದೆ ಎನ್ನುವುದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ. ಇದು ಬಿಟ್ಟು ಯಾವುದೇ ವಿಷಯವಿಲ್ಲ; ಜನ ಯಾವ ವದಂತಿಗೂ ಕಿವಿಗೊಡಬಾರದು ಎಂದು ಎಸ್.ಪಿ. ಡಾ. ರಾಮ್ ಎಲ್. ಅರಸಿದ್ಧಿ ಹೇಳಿದರು. ’ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದ್ದು ಜನ ಭಯಪಡುವ ಅಗತ್ಯವಿಲ್ಲ. ನಮ್ಮ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ಭದ್ರತೆಯನ್ನೂ ಹೆಚ್ಚಿಸಲಾಗಿದೆ. ತನಿಖೆ ಬಳಿಕ ಇನ್ನಷ್ಟು ಮಾಹಿತಿ ಸಿಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.