ಕುಷ್ಟಗಿ: ತುರ್ತು ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಸೇವೆ ಉಚಿತವಾಗಿದ್ದರೂ ಬಡ ಕುಟುಂಬಕ್ಕೆ ಸೇರಿದ ಹತ್ತು ತಿಂಗಳ ತುಂಬು ಗರ್ಭಿಣಿಯನ್ನು ಇಲ್ಲಿಯ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ತುರ್ತು ಪರಿಸ್ಥಿತಿಯಲ್ಲೂ ಬಸ್ನಲ್ಲಿ ಕಳಿಸುವ ಮೂಲಕ ಅಮಾನವೀಯ ರೀತಿಯಲ್ಲಿ ವರ್ತಿಸಿರುವುದು ಶುಕ್ರವಾರ ತಿಳಿದುಬಂದಿದೆ.
ತಾಲ್ಲೂಕಿನ ಕೂಡ್ಲೂರು ತವರು ಗ್ರಾಮದ ಹನುಮವ್ವ ಶಿವಪ್ಪ ಹರಿಜನ ಚೊಚ್ಚಲ ಗರ್ಭಿಣಿಯನ್ನು ತಂದೆ ಚಿದಾನಂದಪ್ಪ ಮೂಲಿಮನಿ ಮತ್ತು ಮುದೇನೂರಿನ ಆಶಾ ಕಾರ್ಯಕರ್ತೆ ಚನ್ನಮ್ಮ ಹಿರೇಮಠ ಶುಕ್ರವಾರ ಇಲ್ಲಿಯ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದರು.
ಆದರೆ ಸದ್ಯ ಯಾರೂ ವೈದ್ಯರು ಇಲ್ಲ, ಅವಧಿ ಮೀರಿದ್ದು ತುರ್ತಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವಂತೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ಹೇಳಿದ್ದಾರೆ. ಹಾಗಾದರೆ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲು ಕೇಳಿದಾಗ 108 ವಾಹನಗಳೆಲ್ಲಾ ದುರಸ್ತಿಯಲ್ಲಿವೆ. ಆಸ್ಪತ್ರೆಯ ತುರ್ತು ಸೇವೆ ವಾಹನ ಬೇಕಾದರೆ ಇಂಧನಕ್ಕೆ ₹2000 ಕೊಡುವಂತೆ ಹೇಳಿದ್ದಾರೆ ಎಂದು ಗರ್ಭಿಣಿಯ ತಂದೆ ಚಿದಾನಂದಪ್ಪ ಮತ್ತು ಆಶಾ ಕಾರ್ಯಕರ್ತೆ ಚನ್ನಮ್ಮ ಹಿರೇಮಠ ‘ಪ್ರಜಾವಾಣಿ’ಗೆ ದೃಢಪಡಿಸಿದ್ದಾರೆ.
ತಮಗೆ ಅಷ್ಟೊಂದು ಹಣ ಕೊಡಲಾಗುವುದಿಲ್ಲ ಎಂದರೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ. ಅನಿವಾರ್ಯವಾಗಿ ಗರ್ಭಿಣಿಯನ್ನು ಬಸ್ನಲ್ಲಿ ಕರೆದೊಯ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.