ಕೊಪ್ಪಳ: ಜಿಲ್ಲೆಯ ಬಡವರು, ಕೂಲಿ ಕಾರ್ಮಿಕರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಪರದಾಡುವಂತಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗಿಂಲೂ ಕಡೆಯಾಗಿದ್ದು, ಕೂಡಲೇ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಸರ್ಕಾರಕ್ಕೆ ಕೆಡಿಪಿ ಸದಸ್ಯ ಅಮರೇಶ್ ಕರಡಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋವಿಡ್-19 ಬಂದಾಗಿನಿಂದ ಜಿಲ್ಲೆಯ ಜನತೆಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ವೈರಸ್ ಸೋಂಕಿತ ಬಡವರಿಗೆ ಸೂಕ್ತ ಚಿಕಿತ್ಸೆ ಸಿಗದೇ ಪ್ರಾಣ ಬಿಡುವಂತಾಗಿದೆ. ಆಸ್ಪತ್ರೆಯಲ್ಲಿ ಸರಿಯಾದ ಸೌಲಭ್ಯ, ವೈದ್ಯರ ಕೊರತೆ, ಸಿಬ್ಬಂದಿ ಇಲ್ಲದೇ ಇರುವ ಬಗ್ಗೆ ನೆಪ ಹೇಳಿ ಬಡವರಿಗೆ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದರ ನೇರ ಪರಿಣಾಮ ಬಡಜನರು, ಕೂಲಿ ಕಾರ್ಮಿಕರ ಮೇಲಾಗುತ್ತಿದೆ. ಜಿಲ್ಲಾ ಆಸ್ಪತ್ರೆ ಎನ್ನುವುದು ಸಧ್ಯ ಯಾವುದೇ ಸೌಲಭ್ಯ ಇಲ್ಲದ ಖಾಲಿ ಬಿಲ್ಡಿಂಗ್ನಂತಿದೆ. ಈ ಬಗ್ಗೆ ಸರ್ಕಾರ, ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಿ ಜಿಲ್ಲೆಯ ಜನತೆಗೆ ಉತ್ತಮ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಕೋರಿದ್ದಾರೆ.
ಕಿಮ್ಸ್ ಆದಾಗಿನಿಂದ ಜಿಲ್ಲಾಸ್ಪತ್ರೆ ಇದರ ಸುಪರ್ದಿಗೆ ಬಂದಿದೆ. ಕಿಮ್ಸ್ ನಿರ್ದೇಶಕರು ಆಸ್ಪತ್ರೆಯ ಸೌಲಭ್ಯಗಳ ಬಗ್ಗೆ ಕಿಂಚಿತ್ತೂ ಗಮನ ಹರಿಸಿಲ್ಲ. ಅವಶ್ಯಕ ವೈದ್ಯರನ್ನು ನೇಮಕ ಮಾಡಿಕೊಂಡು ಬಡವರಿಗೆ ಚಿಕಿತ್ಸೆ ಸಿಗುವಂತೆ ಮಾಡಬೇಕು. ಆದರೆ ಇವರು ತಮ್ಮ ಸ್ವಾರ್ಥ, ಒಣಪ್ರತಿಷ್ಠೆಗಾಗಿ ಜನರ ಪ್ರಾಣ ತೆಗೆಯುತ್ತಿದ್ದಾರೆ ಎಂದು ದೂರಿದ್ದಾರೆ.
ಕಿಮ್ಸ್ ನಿರ್ದೇಶಕರು ಹಾಗೂಜಿಲ್ಲಾ ಶಸ್ತ್ರ ಚಿಕಿತ್ಸಕರ ಮಧ್ಯೆ ಇದುವರೆಗೆ ಶೀತಲ ಸಮರದಿಂದಬಡಜನರ ಜೀವನ ಹಾಳಾಗುತ್ತಿದೆ. ಇದೆಲ್ಲವನ್ನು ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.