ಗಂಗಾವತಿ: ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಅಂಜನಾದ್ರಿ ಬೆಟ್ಟದಲ್ಲಿ ಗುರುವಾರ ಅಂಜನಾದ್ರಿ ಪರಿಸರ ಕೃಷಿ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸೇವಾ ಸಂಸ್ಥೆಯಿಂದ ಸ್ವಚ್ಛತಾ ಕಾರ್ಯಗಾರ ಜರುಗಿತು.
ಅಂಜನಾದ್ರಿ ಬೆಟ್ಟದ ಕೆಳಭಾಗದಲ್ಲಿನ ಟಿಫಿನ್, ಕಬ್ಬಿನರಸ, ತೆಂಗಿನಕಾಯಿ, ಬಟ್ಟೆ, ಬಟಾಣಿ, ಹಣ್ಣು, ಗೊಂಬೆ ಸೇರಿ ಇತರೆ ಸಣ್ಣಪುಟ್ಟ ವ್ಯಾಪಾರಸ್ಥರು ಬೆಳಿಗ್ಗೆಯಿಂದ ಅಪರಾಹ್ನದ ದವರಗೆ ಅಂಜನಾದ್ರಿ ಬೆಟ್ಟದ ಕೆಳಭಾಗದಿಂದ ಮೇಲ್ಭಾಗದವರೆಗೆ ಸ್ವಚ್ಛಗೊಳಿಸಿದರು.
ಸ್ವಚ್ಚತೆಯ ಭಾಗವಾಗಿ ಬಹುತೇಕ ಪ್ಲಾಸ್ಟಿಕ್ ಬಾಟಲ್, ಗುಟ್ಕಾ, ಹಳೆಯ ಚಪ್ಪಲಿ, ಪ್ಲಾಸ್ಟಿಕ್ ಪೇಪರ್ ಸಂಗ್ರಹವಾಗಿದ್ದು, ಅಂದಾಜು 100 ಕೆ.ಜಿ.ಯಷ್ಟು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿದೆ. ಈ ತ್ಯಾಜ್ಯವನ್ನು ಅಂಜನಾದ್ರಿ ದೇವಸ್ಥಾನದ ಮತ್ತು ಆನೆಗೊಂದಿ ಗ್ರಾ.ಪಂನ ಕಸ ವಿಲೇವಾರಿ ವಾಹನದಲ್ಲಿ, ತ್ಯಾಜ್ಯ ವಿಲೇವಾರಿ ಮಾಡಲಾಯಿತು.
ಅಂಜನಾದ್ರಿ ಪರಿಸರ ಕೃಷಿ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಶಾಂತ ರಾಜನಾಳ ಮಾತನಾಡಿ, ‘ಅಂಜನಾದ್ರಿಗೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದು, ದೇವಸ್ಥಾನದ ಬಳಿ ಜಾಗೃತಿ ಕೊರತೆಯ ಕಾರಣ ಬೆಟ್ಟದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬೀಳುತ್ತಿದೆ’ ಎಂದು ಹೇಳಿದರು.
‘ಜಿಲ್ಲಾಡಳಿತ, ದೇವಸ್ಥಾನ ಸಮಿತಿ ಕೂಡಲೇ ಎಚ್ಚೆತ್ತುಕೊಂಡು ಪಾದಗಟ್ಟೆ ಬಳಿಯೇ ಪ್ಲಾಸ್ಟಿಕ್ ಬಾಟಲ್, ಪೇಪರ್, ಚಪ್ಪಲಿ, ಗುಟ್ಕಾ ಒಯ್ಯುವುದು ನಿರ್ಬಂಧಿಸಿ, ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದು ಹೇಳಿದರು.
ಸೇವಾ ಸಂಸ್ಥೆಯ ಉಪಾಧ್ಯಕ್ಷ ಬಾಳಪ್ಪ, ಕಾರ್ಯದರ್ಶಿ ದೊಡ್ಡಬಸಪ್ಪ, ಆಂಜನೇಯಗೌಡ, ಮಂಜುನಾಥ ಚಿಕ್ಕರಾಂಪುರ, ನಾಗರಾಜ ಎಂ., ನಿಂಗಜ್ಜ, ರಾಮನಾಯಕ, ಹನುಮವ್ವ ಸೇರಿ ಅಂಜನಾದ್ರಿ ಕೆಳಭಾಗದ ಸಣ್ಣಪುಟ್ಟ ಅಂಗಡಿಗಳ ವ್ಯಾಪಾರಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.