ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಭಾನುವಾರ (ಡಿ 24) ಹನುಮಮಾಲೆ ವಿಸರ್ಜನೆ ನಡೆಯಲಿದ್ದು, ಭಕ್ತರ ಸ್ವಾಗತಕ್ಕೆ ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ.
ಶನಿವಾರ ಸಂಜೆಯಿಂದಲೇ ಭಕ್ತರು ಪಾದಯಾತ್ರೆ ಮೂಲಕ ಅಂಜನಾದ್ರಿಯತ್ತ ಸಾಗಿ ಬಂದರು. ಹನುಮನ ಹೆಸರಿನಲ್ಲಿ ತಮ್ಮ ಶಕ್ತಿಯನುಸಾರ ಭಕ್ತರು 5, 11 ಹಾಗೂ 21 ದಿನಗಳ ಕಾಲ ವ್ರತದ ಸಂಕಲ್ಪ ಮಾಡಿ ತುಳಸಿ ಮಾಲೆ ಧರಿಸುತ್ತಾರೆ. ವ್ರತ ಪೂರ್ಣಗೊಳಿಸಿ ಅಂಜನಾದ್ರಿಯಲ್ಲಿ ಮಾಲೆ ವಿಸರ್ಜನೆ ಮಾಡುವ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಭಕ್ತರ ಸ್ವಾಗತಕ್ಕಾಗಿ ಪೂರ್ಣ ಬೆಟ್ವವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಸರ್ಕಾರವೇ ಹನುಮಮಾಲಾಧಾರಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಿದೆ. ಅಂದಾಜು 90 ಸಾವಿರದಿಂದ ಒಂದು ಲಕ್ಷದ ತನಕ ಭಕ್ತರು ಬರುವ ನಿರೀಕ್ಷೆಯಿದೆ ಎಂದು ಹನುಮಮಾಲಾ ವಿಸರ್ಜನೆ ಕಾರ್ಯಕ್ರಮದ ನೋಡಲ್ ಅಧಿಕಾರಿಯಾದ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ತಿಳಿಸಿದ್ದಾರೆ.
50 ಸಾವಿರ ಮಾಲಾಧಾರಿಗಳಿಗೆ ವಿತರಿಸಲು ಎರಡು ಲಡ್ಡು, ಒಂದು ತೀರ್ಥದ ಬಾಟಲಿ, ಹನುಮ ದೇವರ ಫೋಟೊ ಇರುವ ಕಿಟ್ ತಯಾರಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಗಂಗಾವತಿ ನಗರ ಮತ್ತು ಅಂಜನಾದ್ರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕಳೆದ ವರ್ಷ ಇದೇ ಸಮಯದ ವೇಳೆಗೆ ಶಾಸಕ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್ಪಿಪಿ) ಘೋಷಿಸಿದ್ದರು. ಈಗ ರೆಡ್ಡಿ ಕೂಡ ಮಾಲೆ ಧರಿಸಿದ್ದು ಭಕ್ತರ ಜೊತೆ ವಿಸರ್ಜನೆ ಮಾಡುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.