ADVERTISEMENT

ಅಂಜನಾದ್ರಿ ಬೆಟ್ಟದಲ್ಲಿ ಕಂದಕಕ್ಕೆ ಬಿದ್ದ ಮಹಿಳೆ ರಕ್ಷಿಸಿದ ದೇವಸ್ಥಾನ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2025, 16:14 IST
Last Updated 2 ಜನವರಿ 2025, 16:14 IST
ಅಂಜನಾದ್ರಿ ಬೆಟ್ಟ
ಅಂಜನಾದ್ರಿ ಬೆಟ್ಟ   

ಗಂಗಾವತಿ: ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಅಂಜನಾದ್ರಿ ಬೆಟ್ಟದಿಂದ ಕಂದಕಕ್ಕೆ ಬಿದ್ದಿದ್ದ ಮಹಿಳೆಯನ್ನು ದೇವಾಲಯ ಸಿಬ್ಬಂದಿ ರಕ್ಷಿಸಿದ್ದು, ಗುರುವಾರ ಸಂಜೆ ಕೊಪ್ಪಳದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅರೆಪ್ರಜ್ಞಾವಸ್ಥೆಯಲ್ಲಿರುವ ಮಹಿಳೆ ವಿಚಾರಿಸಲಾಗಿದ್ದು, ರಾಯಚೂರು ಮೂಲದ ಅಶ್ವಿನಿ ಎಂದು ಹೇಳುತ್ತಿದ್ದು, ಬೇರೆ ಏನನ್ನು ಹೇಳುತ್ತಿಲ್ಲ. ಎಡಗಾಲಿಗೆ ಒಳಪೆಟ್ಟಾಗಿದ್ದು, ಹುಳುಗಳು ಕಡಿದಿದ್ದರಿಂದ ಕೈ, ಕಾಲು ಮತ್ತು ಕುತ್ತಿಗೆ ಭಾಗದಲ್ಲಿ ತುರಿಸಿದ ಕಲೆಗಳಿವೆ.

ಬೆಟ್ಟದ ಮೇಲಿನ ದೇವಾಲಯದ ಹಿಂಭಾಗದಲ್ಲಿ ಸನ್‌ಸೆಟ್ ಪ್ರದೇಶವಿದ್ದು, ಅದರ ಕೆಳಭಾಗದಲ್ಲಿರುವ 40 ಅಡಿ ಆಳದ ಕಂದಕದಲ್ಲಿ ಮಹಿಳೆ ಪತ್ತೆಯಾಗಿದ್ದಾಳೆ. ಸೆಲ್ಫಿಗಾಗಿ ಸನ್ ಸೆಟ್ ಹತ್ತಿರ ಹೋಗಿದ್ದ ಪ್ರವಾಸಿಗರಿಗೆ, ಕಂದಕದಿಂದ ಮಹಿಳೆ ಕೂಗುತ್ತಿರುವುದನ್ನು ನೋಡಿ, ದೇವಾಲಯ ಸಿಬ್ಬಂದಿಗೆ ತಿಳಿಸಿದ್ದಾರೆ.

ADVERTISEMENT

ಸಿಬ್ಬಂದಿ ನೆರವಿನೊಂದಿಗೆ ಮಹಿಳೆಯನ್ನು ರಕ್ಷಿಸಿ, ನಗರದ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ಮಾಹಿತಿ ನೀಡುತ್ತಿಲ್ಲ. ಆಸ್ಪತ್ರೆಗೆ ದೇವಾಲಯ ಸಿಇಒ ಪ್ರಕಾಶ ರಾವ್, ಡಿವೈಎಸ್‌ಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ, ಗ್ರಾಮೀಣ ಪಿಐ ಸೋಮಶೇಖರ ಗೌಡ ಜುತ್ತಲ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು

ಮಾನಸಿಕ ಅಸ್ವಸ್ಥಳಂತೆ ವರ್ತಿಸುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸಿದ್ದಾಳೆ. ಅರೆ ಪ್ರಜ್ಞಾಸ್ಥಿತಿಯಲ್ಲಿದ್ದರಿಂದ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಚಿಕಿತ್ಸೆ ನೀಡಿದ ಸಿಬ್ಬಂದಿ ತಿಳಿಸಿದ್ದಾರೆ.

ಒಬ್ಬಳೆ ಬೆಟ್ಟಕ್ಕೆ ಬಂದಿದ್ದಳು ಅಥವಾ ಯಾರ ಜತೆಗಾದರೂ ಬಂದಿದ್ದರು ಎಂಬುದ್ದನ್ನು ಬೆಟ್ಟದ ಮೇಲಿನ ಸಿಸಿಟಿವಿ ಪರಿಶೀಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ ಭೇಟಿ ನೀಡಿ, ಪರಿಶೀಲಿಸಿ ಮಾಹಿತಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.