ADVERTISEMENT

ಎಪಿಎಂಸಿ: ಮೂಲಸೌಕರ್ಯಗಳದ್ದೇ ಕೊರತೆ

ಎಲ್ಲೆಡೆ ಅವ್ಯವಸ್ಥೆಯ ಆಗರವಾದ ರೈತರ ತಂಗುದಾಣಗಳು, ವಿಶ್ರಾಂತಿಗೆ ಕಟ್ಟಡ, ಮರ ಆಶ್ರಯ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 2:45 IST
Last Updated 21 ಸೆಪ್ಟೆಂಬರ್ 2020, 2:45 IST
ಎಸ್.ಎ ಗಫಾರ್
ಎಸ್.ಎ ಗಫಾರ್   

ಕೊಪ್ಪಳ: ಜಿಲ್ಲೆಯ ಐದು ಎಪಿಎಂಸಿಗಳಲ್ಲಿ ನಿತ್ಯ ಲಕ್ಷಾಂತರ ವ್ಯಾಪಾರ ನಡೆಯುತ್ತಿದ್ದರೂ ಮೂಲಸೌಕರ್ಯಗಳ ತೀವ್ರ ಕೊರತೆಯಿದೆ.. ಇದರಿಂದಾಗಿ ನಿತ್ಯ ರೈತರು ತೊಂದರೆ ಅನುಭವಿಸುತ್ತಿದ್ದಾರೆ.

ಜಿಲ್ಲೆಯಲ್ಲಿಯೇ ಹೆಚ್ಚಿನ ವಹಿವಾಟು ನಡೆಸುವ ಕಾರಟಗಿ ಎಪಿಎಂಸಿ ಉತ್ತಮ ದರ್ಜೆಯಲ್ಲಿದ್ದರೂ ಸೌಕರ್ಯಗಳ ಕೊರತೆ ಇದೆ.

ಕೊಪ್ಪಳ, ಕುಕನೂರು, ಕುಷ್ಟಗಿ, ಕಾರಟಗಿ ಮತ್ತು ಗಂಗಾವತಿ ಸೇರಿ ಐದು ಎಪಿಎಂಸಿಗಳಿವೆ. ಕೊಪ್ಪಳ, ಕುಕನೂರ, ಕುಷ್ಟಗಿ ಮಾರುಕಟ್ಟೆಗೆ ದ್ವಿದಳ ಧಾನ್ಯ, ತೋಟಗಾರಿಕೆ ಬೆಳೆಗಳು, ಹೂವು, ಹಣ್ಣು, ತರಕಾರಿ ಹೆಚ್ಚಿನ ಸಂಖ್ಯೆಯಲ್ಲಿ‌ ಮಾರಾಟಕ್ಕೆ ಬರುತ್ತವೆ.

ADVERTISEMENT

ಕಾರಟಗಿ, ಗಂಗಾವತಿ ಮಾರುಕಟ್ಟೆ ಅಕ್ಕಿ ವಹಿವಾಟಿಗೆ ಪ್ರಸಿದ್ಧಿ ಪಡೆದಿದೆ. ದೂರದ ತಮಿಳುನಾಡಿನಿಂದಲೂ ವ್ಯಾಪಾರಸ್ಥರು ಬರುತ್ತಾರೆ. ಹೀಗಾಗಿ ಸದಾ ದಟ್ಟಣೆಯಿಂದ ಕೂಡಿರುತ್ತವೆ.

ಎಲ್ಲ ಎಪಿಎಂಸಿಗಳಲ್ಲಿ ಶುದ್ಧ ಕುಡಿಯುವ ನೀರು, ಉತ್ತಮ ರಸ್ತೆ, ಚರಂಡಿ ಸಮಸ್ಯೆಗಳು ಪ್ರಮುಖವಾಗಿವೆ. ರೈತರ ತಂಗುದಾಣಗಳಂತೂ ಅವ್ಯವಸ್ಥೆಯ ಆಗರವಾಗಿವೆ.

ರೈತರ ಅನುಕೂಲಕ್ಕೆ ನಿರ್ಮಿಸಲಾದ ರೈತ ಭವನಗಳು ಕೆಲವಡೆ ಬಳಕೆಗೆ ಬಂದಿಲ್ಲ. ವಿಶ್ರಾಂತಿಗೆ ಮರ, ಕಟ್ಟಡಗಳನ್ನೇ ರೈತರು ಆಶ್ರಯಿಸಬೇಕಿದೆ. ಗುಣಮಟ್ಟದ ಕ್ಯಾಂಟಿನ್ ಸೌಲಭ್ಯ ಇಲ್ಲ. ರಸ್ತೆ ಬದಿ ಅಸ್ವಚ್ಛತೆಯೆ ಹೊಟೇಲ್‌ಗಳೇ ಹೆಚ್ಚಾಗಿವೆ.

ನಿತ್ಯ ನೂರಾರು ಚಾಲಕರು, ಸಹಾಯಕರು, ಹಮಾಲರನ್ನು ಹೊತ್ತು ತರುವ ವಾಹನಗಳ ದೊಡ್ಡ ದಂಡೇ ಇಲ್ಲಿರುತ್ತದೆ. ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ನೂರಾರು ಸಂಖ್ಯೆಯಲ್ಲಿ ಬಂದಿರುತ್ತಾರೆ. ರಸ್ತೆ‌ಮೇಲಿನ ವ್ಯಾಪರದಂತೆ ಬೆಳಗಿನ ಜಾವ ವ್ಯಾಪಾರ ಮಾಡಿ ಹೊರಡುವ ಅವರಿಂದ ತೆರಿಗೆ ಹಣ ವಸೂಲಿ ಮಾಡುವುದಕ್ಕಷ್ಟೇ ಎಪಿಎಂಸಿಗಳು ಸೀಮಿತವಾಗಿವೆ.

ಸೋರುತ್ತಿರುವ ಉಗ್ರಾಣಗಳು: ದವಸ, ಧಾನ್ಯ ಸಂಗ್ರಹಿಸಲು ನಿರ್ಮಿಸಿರುವ ಕೆಲವು ಉಗ್ರಾಣಗಳು ಮಳೆ ಬಂದರೆ ಸೋರುತ್ತಿವೆ. ಇದರಿಂದ ಧಾನ್ಯಗಳು ಹಾಳಾಗುತ್ತಿವೆ. ಕೆಲವು ಧಾನ್ಯಗಳನ್ನು ದೀರ್ಘಾವಧಿವರೆಗೆ ಕಾಯ್ದಿಟ್ಟುಕೊಳ್ಳುವ ವ್ಯವಸ್ಥೆ ಇಲ್ಲ. ಇಲಿ, ಹೆಗ್ಗಣಗಳ ಕಾಟವೂ ಜೋರು. ಇವುಗಳ ಉಪಟಳ ಎಪಿಎಂಸಿ ಸುತ್ತಮುತ್ತಲಿನ ಪ್ರವೇಶಕ್ಕೂ ಹರಡಿರುತ್ತದೆ.

ರೈತರ ಜೀವನಾಡಿಗಳಾದ ಎಪಿಎಂಸಿಗಳನ್ನು ಉತ್ತಮ ದರ್ಜೆಯ ಗುಣಮಟ್ಟದ ಕಟ್ಟಡಗಳೊಂದಿಗೆ ಬಳಕೆ ನೀಡುವುದರ ಜೊತೆಗೆ ಕಾಲಕಾಲಕ್ಕೆ ನಿರ್ವಹಣೆ ಮಾಡಬೇಕು. ರೈತರಿಗೆ ಅವಶ್ಯವೆನಿಸಿದ ಮೂಲಸೌಕರ್ಯಗಳ ಕಡೆಗೆ ಸರ್ಕಾರ, ಆಡಳಿತ ಮಂಡಳಿ ಗಮನ ಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.