ಹನುಮಸಾಗರ: ‘ಸರ್ಕಾರ ಕಲಾವಿದರಿಗೆ ನೆರವು ನೀಡಬೇಕು’ ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾ ಘಟಕದ ಉಪಾಧ್ಯಕ್ಷ ಮಲ್ಲಯ್ಯ ಕೋಮಾರಿ ಒತ್ತಾಯಿಸಿದರು.
ಮದೀನಾ ಜಾಮಿಯಾ ಮಸೀದಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯಿಂದ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದಾಸ್ಯತ್ವದ ಸಂಕೇತವಾಗಿದ್ದ ಹೈದರಾಬಾದ್ ಕರ್ನಾಟಕದ ಹೆಸರು ಕಲ್ಯಾಣ ಕರ್ನಾಟಕ ಎಂದು ಬದಲಾಗಿದೆ. ನಿಜವಾಗಿ ಈ ಭಾಗದ ಕಲ್ಯಾಣವಾಗಬೇಕಾದರೆ ಬಡಜನರ, ವಿದ್ಯಾರ್ಥಿಗಳ, ಸಾಹಿತಿಗಳ, ಕಲಾವಿದರ ಏಳಿಗೆ ಅವಶ್ಯ. ಸಾಕಷ್ಟು ಸೌಲಭ್ಯಗಳಿದ್ದರೂ ಕಲಾವಿದರಿಗೆ ಮಾಹಿತಿ ಇಲ್ಲದ ಕಾರಣ ಅವರ ನೆರವಿಗೆ ಬರದಂತಾಗಿವೆ ಎಂದರು.
ನಮ್ಮ ಭಾಗದಲ್ಲಿ ಜನಪದ, ಡೊಳ್ಳು, ಕೊರವ ಸಮಾಜದ ಕಲಾವಿದರು, ಸಂಪ್ರದಾಯ ಕಲಾವಿದರು, ಕಣಿವಾದಕರು, ಸಂಗೀತ ಕಲಾವಿದರು ಹೀಗೆ ಪಟ್ಟಿ ಬೆಳೆಯುತ್ತದೆ. ಆದರೆ ಈವರೆಗೂ ಅಂಥ ಕಲಾವಿದರನ್ನು ಹುಡುಕಿ ಅವರಿಗೆ ಅವಕಾಶ ನೀಡಿ ಅವರ ಬದುಕಿಗೆ ಆಸರೆಯಾಗುವಂಥ ಚಟುವಟಿಕೆಗಳು ನಡೆಯದಿರುವುದು ವಿಷಾದನೀಯ ಎಂದರು.
ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಏಳು ಜಿಲ್ಲೆಗಳಲ್ಲಿ ಅಸ್ತಿತ್ವಕ್ಕೆ ಬಂದಿದೆ. ಒಕ್ಕೂಟದಲ್ಲಿರುವ ಪದಾಧಿಕಾರಿಗಳು, ಕಲಾವಿದರು, ಸಂಘಟಕರಾಗಿರುವುದರಿಂದ ಕಲಾವಿದರ ನೋವಿನ ಅರಿವಿದೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯವರು ಈ ಭಾಗದ ಸಾಹಿತಿಗಳು ಬರೆದಿರುವ ಪುಸ್ತಕಗಳನ್ನು ಒಂದು ಬಾರಿ ಮಾತ್ರ ಖರೀದಿಸುತ್ತದೆ. ಮತ್ತೆ ಖರೀದಿ ಮಾಡದ ಕಾರಣ ಸಾಹಿತಿಗಳು ಸಾಲಗಾರರಾಗಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯವರು ಇಂಥ ಲೇಖಕರ ಪುಸ್ತಕ ಖರೀದಿಸಬೇಕು ಎಂದು ನಮ್ಮ ಒಕ್ಕೂಟದಿಂದ ಒತ್ತಾಯಿಸಿದ್ದೇವೆ ಎಂದರು.
ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಕಿಶನರಾವ್ ಕುಲಕರ್ಣಿಯವರನ್ನು ಸನ್ಮಾನಿಸಲಾಯಿತು.
ಜನಾಬ ಗೇಸೂದರಾಜ ಮೂಲಿಮನಿ, ಮಹಿಬೂಬ ಮೆಣೆದಾಳ ಮಾತನಾಡಿದರು. ಪ್ರಮುಖರಾದ ರಾಜಮಹ್ಮದ್, ದಾದೇಸಾಬ ಡಲಾಯಿತ್, ದಾದೇಸಾಬ ಮೂಲಿಮನಿ, ಅಬ್ದುಲ್ರಜಾಕ ಚಳಗೇರಿ, ದಾದುಸಾಬ ಗುಡ್ಡದಭಾವಿ, ದಾವಲಸಾಬ ಹೊಸಮನಿ, ಮರ್ತುಜಾಸಾಬ ಬಂಗಾರಗುಂಡ, ಖಾಜೇಸಾಬ ಡಲಾಯಿತ್, ಲಾಲಸಾಬ ಬಾಗವಾನ್, ಚಂದ್ರಶೇಖರ ಹಿರೇಮನಿ, ಬಸಪ್ಪ ದೋಟಿಹಾಳ ಹಾಗೂ ನೀಲಪ್ಪ ಕುದರಿ, ಕಲೀಲಅಹ್ಮದ್ ಚೌದರಿ, ಜಹಂಗೀರ ಚಳಗೇರಿ, ದಸ್ತಗಿರಿ ಮೂಲಿಮನಿ ಇದ್ದರು.
ಕಲೀಲಅಹ್ಮದ್ ಚೌದರಿ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.