ಗಂಗಾವತಿ: ’ಭಾರತದಂತ ಶಕ್ತಿಶಾಲಿ ದೇಶದಲ್ಲಿ ಸಾಮರಸ್ಯ ಕದಡಿ ಭಾವೈಕ್ಯತೆಗೆ ಧಕ್ಕೆ ತರುವ ಮುಸ್ಲಿಂ ಮತ್ತು ಹಿಂದು ಭಯೋತ್ಪಾದನೆ ತಡೆಯುವುದು ಭಜರಂಗ ದಳದ ಮುಖ್ಯ ಉದ್ದೇಶ‘ ಎಂದು ವಿಶ್ವ ಹಿಂದು ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ಮಿಲಿಂದ್ ಪಾಂಡ್ಯ ಹೇಳಿದರು.
ಹನುಮ ಜಯಂತಿ ಪ್ರಯುಕ್ತ ಶುಕ್ರವಾರ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಹಮ್ಮಿಕೊಂಡಿದ್ದ ಹನುಮ ಮಾಲಾಧಾರಿಗಳ ಮಾಲಾ ವಿರಮಣ ಬಳಿಕ ನಡೆದ ಧರ್ಮ ಸಂಸತ್ತಿನಲ್ಲಿ ಮಾತನಾಡಿದ ಅವರು, ’ಹಿಂದೂ ಸಂಘಟನೆ ಬಲಪಡಿಸುವುದು, ಗೋ ಸಂರಕ್ಷಿಸುವುದು, ಅಮರನಾಥ ಯಾತ್ರಿಕರನ್ನು ರಕ್ಷಿಸುವುದು ಮುಖ್ಯ‘ ಎಂದರು.
’ಹನುಮನಿಗೆ ಇತಿಹಾಸದಲ್ಲಿ ಎಲ್ಲಿಯೂ ಕಪ್ಪುಚುಕ್ಕೆ, ದುಶ್ಚಟ ಇಲ್ಲ. ರಾಮನ ಭಕ್ತನಾಗಿ ಆತನ ಕೆಲಸ ಶಾಶ್ವತ. ಆತನ ಹೆಸರಿನ ಭಜರಂಗ ದಳ ಮತ್ತು ಅದರ ಕಾರ್ಯಕರ್ತ ಹನುಮನ ಆದರ್ಶ ಹೊಂದಬೇಕು‘ ಎಂದರು.
’ಹನುಮ ಮಾಲೆಗೆ ನಾಡಿನಾದ್ಯಂತ ವಿಶೇಷವಾಗಿ ಗಂಗಾವತಿಯಲ್ಲಿ ಮುಸ್ಲಿಮರು ಸ್ವಾಗತಿಸಿ ಪರಿ ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ. ಆದರ್ಶ ಸಮಾಜಕ್ಕೆ ಇಂತಹ ಸಾಮರಸ್ಯ ಅಗತ್ಯ‘ ಎಂದರು.
ವಿಶ್ವ ಹಿಂದು ಪರಿಷತ್ತಿನ ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು ರಾಜ್ಯ ಸಂಯೋಜಕ ಸೂರ್ಯನಾರಾಯಣ, ಕರ್ನಾಟಕ ಉತ್ತರ ಪ್ರಾಂತ್ಯ ಸಂಯೋಜಕ ಸ್ವರೂಪ, ಕ್ಷೇತ್ರ ಸಂಚಾಲಕ ಕೇಶವ ಹೆಗ್ಡೆ, ವಿಎಚ್ಪಿಯ ಮಾತೃ ಶಕ್ತಿಯ ವಿಭಾಗೀಯ ಪ್ರಾಂತ ಸಂಚಾಲಕಿ ವಿಜಯಲಕ್ಷ್ಮಿ, ಪ್ರಮುಖರಾದ ವಿನಯಕುಮಾರ, ದೊಡ್ಡಯ್ಯಸ್ವಾಮಿ, ಸುಭಾಷ ಸಾದಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.