ಕೊಪ್ಪಳ: 'ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆನನ್ನ ಮೇಲೆ ಬಹಳ ಪ್ರೀತಿ. ಅವರು ದೊಡ್ಡವರು ಅವರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಅವರು ತಾಲ್ಲೂಕಿನ ಹುಲಿಗಿಗೆ ಭೇಟಿ ನೀಡಿ ಹುಲಿಗೆಮ್ಮೆ ದೇವಿ ದರ್ಶನ ಪಡೆದು ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
'ನಮ್ಮ ಕುಟುಂಬದ ಬಗ್ಗೆ ಯಾರೋ ಹೈಕಮಾಂಡಿಗೆ ಪತ್ರ ಬರೆದಿದ್ದಾರೆ ಅಂತೆ. ತುಂಬಾ ಸಂತೋಷ. ಅದರ ಬಗ್ಗೆ ದೆಹಲಿ ನಾಯಕರು ವಿಚಾರಣೆ ಮಾಡುತ್ತಾರೆ' ಎಂದರು.
'ರಾಜ್ಯದಲ್ಲಿ ಮೀಸಲಾತಿಗೆ ನಡೆಯುತ್ತಿರುವ ಹೋರಾಟಕ್ಕೆ ನಮ್ಮ ವಿರೋಧವಿಲ್ಲ. ಹೋರಾಟ ಸಹಜ. ಈ ವಿಷಯದಲ್ಲಿ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಸಂವಿಧಾನದ ಅಡಿ ಯಾರಿಗೆ ಮೀಸಲಾತಿ ನೀಡಬೇಕು ಎಂಬುವುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ' ಎಂದು ಹೇಳಿದರು.
'ಬಸವಕಲ್ಯಾಣ, ಮಸ್ಕಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೆ.ಮುಂದಿನ ಚುನಾವಣೆಯಲ್ಲಿ ನಾನು ಎಲ್ಲಿ ಅಭ್ಯರ್ಥಿಯಾಗಬೇಕು ಎಂಬುವುದುಗೊತ್ತಿಲ್ಲ. ಅದನ್ನು ಪಕ್ಷದ ನಿರ್ಣಯ ಮಾಡುತ್ತೆ' ಎಂದು ಚುನಾವಣೆಗೆ ಸ್ಪರ್ಧಿಸುವ ಕುರಿತು ಸ್ಪಷ್ಟಪಡಿಸಿದರು.
ರಾಮಮಂದಿರ ಕುರಿತು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳಿಕೆಗೆಪ್ರತಿಕ್ರಿಯಿಸಿದ ಅವರು, 'ಯಾರಾದರೂ ಅವಿದ್ಯಾವಂತರು ಮಾತನಾಡಿದರೆ ಉತ್ತರ ಕೊಡಬಹುದಿತ್ತು.ವಿದ್ಯಾವಂತರಾಗಿ ಮಾತಾಡಿದ್ರೆ ಹೇಗೆ.ಸುಪ್ರೀಂ ಕೋರ್ಟ್ ತೀರ್ಪಿನ ನಂತರವೂ ಕೂಡಾ ಅದು ವಿವಾದಿತ ಅನ್ನೋದು ಆಶ್ಚರ್ಯ.ಇಂತಹ ವಿಷಯದಲ್ಲಿ ರಾಜಕೀಯ ಮಾಡಿ ಮತದಾರರನ್ನು ಅಡ್ಡದಾರಿಗೆ ತೆಗೆದುಕೊಂಡು ಹೋಗಿದ್ದಕ್ಕೆ ಕಾಂಗ್ರೆಸ್ಗೆ ಇಂತಹ ದುರ್ಗತಿ ಬಂದಿದೆ ಎಂದು ಟೀಕಿಸಿದರು.
ಬಿಜೆಪಿ ಯುವ ಮುಖಂಡ ಅಮರೇಶ ಕರಡಿ ವಿಜಯೇಂದ್ರ ಅವರನ್ನು ಸ್ವಾಗತಿಸಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆದುಕೊಂಡು ಹೋದರು. ಪಕ್ಷದ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಶನಿವಾರ ಅಂಜನಾದ್ರಿ ಪರ್ವತಕ್ಕೆ ಪಾದಯಾತ್ರೆ ಮೂಲಕ ಆಂಜನೇಯನ ದರ್ಶನ ಪಡೆದು ಕಾರಟಗಿಯಲ್ಲಿ ನಡೆಯುವ ಪಂಚಾಯಿತಿ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಸ್ಕಿ ಉಪಚುನಾವಣೆ ಕುರಿತು ನಡೆಯುವ ಪೂರ್ವಸಿದ್ಧತಾ ಸಭೆಯಲ್ಲಿ ವಿಜಯೇಂದ್ರ ಪಾಲ್ಗೊಳ್ಳಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.