ಕುಷ್ಟಗಿ (ಕೊಪ್ಪಳ ಜಿಲ್ಲೆ): ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿಯಲ್ಲಿನ ಶೌಚಾಲಯ ಮತ್ತು ಮೂತ್ರಾಲಯಗಳನ್ನು ಭಾನುವಾರ ಸ್ವತಃ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಮತ್ತು ಸಿಬ್ಬಂದಿ ಶುಚಿಗೊಳಿಸಿದರು.
ರಜೆ ಇದ್ದರೂ ಕಚೇರಿಗೆ ಬಂದ ಕ್ಷೇತ್ರ ಸುರೇಂದ್ರ ಕಾಂಬಳೆ ಅವರು ಶೌಚಾಲಯ, ಮೂತ್ರಾಲಯ ಶುಚಿಗೊಳಿಸಿತೊಡಗಿದರು. ಅಲ್ಲಿಗೆ ಬಂದ ಸಿಬ್ಬಂದಿ ದಾವಲಸಾಬ ವಾಲೀಕಾರ, ಶರಣಪ್ಪ ತೆಮ್ಮಿನಾಳ ಅವರೂ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದರು. ಅಲ್ಲಿನ ಕಸ ಕಡ್ಡಿ ತೆಗೆದಿದ್ದು ಅಲ್ಲದೇ ಸಾರ್ವಜನಿಕರು ಉಗುಳಿದ್ದ ಕೆಂಪು ಕಲೆ, ಹೊಲಸನ್ನು ಪಿನಾಯಿಲ್ ಹಾಕಿ ನೀರಿನಿಂದ ಸ್ವಚ್ಛಗೊಳಿಸಿದರು.
‘ಮೂತ್ರಾಲಯ, ಶೌಚಾಲಯದಿಂದ ದುರ್ನಾತ ಬರುತಿತ್ತು. ಹೀಗಾಗಿ ಬೇರೆಯವರಿಗೆ ಹೇಳದೆ ನಾನೇ ಮೊದಲು ಕೆಲಸಕ್ಕೆ ಮುಂದಾದೆ’ ಸುರೇಂದ್ರ ಕಾಂಬಳೆ ‘ಪ್ರಜಾವಾಣಿ’ಗೆ ತಿಳಿಸಿದರು.
ಅವರಿಂದ ಪ್ರೇರಣೆಗೊಂಡ ತಾಲ್ಲೂಕಿನ ಅಡವಿಭಾವಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ರಾಜಕುಮಾರ ನಾಯಕ ಕೂಡ ತಮ್ಮ ಶಾಲೆಯ ಶೌಚಾಲಯ, ಮೂತ್ರಾಲಯಗಳನ್ನು ಸ್ವತಃ ಸ್ವಚ್ಛಗೊಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.