ಕೊಪ್ಪಳ: ಭರತ ಹುಣ್ಣಿಮೆ ಅಂಗವಾಗಿ ಇಲ್ಲಿನ ಭಾಗ್ಯನಗರದಲ್ಲಿರುವ ಬನಶಂಕರಿ ದೇವಾಲಯದ ರಥೋತ್ಸವ ಭಾನುವಾರು ಸಾವಿರಾರು ಭಕ್ತರ ನಡುವೆ ಸಂಭ್ರಮದಿಂದ ನಡೆಯಿತು.
ಬೆಳಿಗ್ಗೆಯಿಂದಲೇ ಬನಶಂಕರಿ ದೇವಿಗೆ ತರಹೇವಾರಿ ಹೂಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಸಂಜೆಯವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಗೋದೂಳಿಯ ಸಮಯದಲ್ಲಿ ಎಳೆದ ತೇರಿಗೆ ಭಕ್ತರು ಉತ್ತುತ್ತಿ ಎಸೆದು ಭಕ್ತಿ ಸಮರ್ಪಿಸಿದರು. ಬಳಿಕ ತೇರು ಮುಟ್ಟಿ ನಮಸ್ಕರಿಸಿದರು.
ಕೇಸರಿ, ಬಿಳಿ ಹಾಗೂ ಹಸಿರಿನ ರಾಷ್ಟ್ರಧ್ವಜದ ಬಣ್ಣಗಳಿಂದ ತೇರಿನ ಮೇಲ್ಬಾಗವನ್ನು ಅಲಂಕರಿಸಿ ಕೆಳಗಡೆ ಹೂವಿನಿಂದ ಅಲಂಕಾರ ಮಾಡಲಾಗಿತ್ತು.
ಸಂಜೆ ಆರು ಗಂಟೆಯಾಗುತ್ತಿದ್ದಂತೆಯೇ ಭಕ್ತರು ಭಕ್ತಿಯಿಂದ ತೇರು ಎಳೆದರು. ಪಾದಗಟ್ಟೆ ಮುಟ್ಟುವ ತನಕ ಪರಸ್ಪರ ಕೈ ಜೋಡಿಸಿ ಸಂಭ್ರಮಿಸಿದರು. ಮಕ್ಕಳ ಆಟಿಕೆ ಸಾಮಗ್ರಿಗಳು, ಬಲೂನ್ಗಳು ಆಕರ್ಷಣೆಯಾಗಿದ್ದವು. ಜಾತ್ರೆಯ ಅಂಗವಾಗಿ ದೇವಸ್ಥಾನವನ್ನು ವಿವಿಧ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ರಾತ್ರಿ ತನಕವೂ ಭಕ್ತರು ಕಾಯಿ ಒಡೆಯಿಸಿಕೊಂಡು, ದೇವಿ ಮೂರ್ತಿಗೆ ಹೂ, ಹಣ್ಣು ಸಮರ್ಪಣೆ ಮಾಡಿ ಆಶೀರ್ವಾದ ಪಡೆಯುತ್ತಿದ್ದ ಚಿತ್ರಣ ಕಂಡು ಬಂತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.