
ಕೊಪ್ಪಳ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಗೆಲುವು ಸಾಧಿಸಿದ್ದರಿಂದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಇಲ್ಲಿನ ಅಶೋಕ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಭಾಗ್ಯನಗರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ ಜರುಗಿತು.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ನಿತೀಶ್ ಕುಮಾರ್ ಹೆಸರುಗಳನ್ನು ಕೂಗಿ ಜೈಕಾರ ಹಾಕಿದ ಮುಖಂಡರು ಪರಸ್ಪರ ಸಿಹಿ ತಿನಿಸಿ ಸಂಭ್ರಮಿಸಿದರು. ದೊಡ್ಡ ಸರಪಳಿ ಇರಿಸಿ ಪಟಾಕಿಗಳನ್ನು ಸಿಡಿಸಿದರು. ಬಿಜೆಪಿ, ಜೆಡಿಎಸ್ ಹಾಗೂ ಎನ್ಡಿಎ ಹೆಸರಿನಲ್ಲಿ ಘೋಷಣೆಗಳನ್ನು ಕೂಗಿದರು.
ಭಾಗ್ಯನಗರದಲ್ಲಿ ಬಿಜೆಪಿ ಮುಖಂಡರಾದ ಸುಬ್ಬಯ್ಯಸಲ್ಲ, ಶ್ರೀನಿವಾಸ್ ಹ್ಯಾಟಿ, ಸುರೇಶ್ ಪೆದ್ದಿ, ಕೊಟ್ರೇಶ್ ಶೇಡ್ಮಿ, ನೀಲಕಂಠ ಮೈಲಿ, ವಾಸುದೇವ್, ಮೇಘರಾಜ್, ಪರಶುರಾಮ್ ಪವಾರ್, ಸುರೇಶ್ ದರಗದಕಟ್ಟಿ, ಕೊಟ್ರೇಶ್ ಕವಲೂರು, ಪರಮೇಶ ಉಪ್ಪಿನ, ಚಂದ್ರಶೇಖರ್ ಅರಿಕೇರಿ ಪಾಲ್ಗೊಂಡಿದ್ದರು. ಅಶೋಕ ವೃತ್ತದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಪಕ್ಷದ ಮುಖಂಡರಾದ ಸುನಿಲ್ ಹೆಸರೂರು, ಅಪ್ಪಣ್ಣ ಪದಕಿ, ಕೆ.ಜಿ. ಕುಲಕರ್ಣಿ, ರಾಜು ಬಾಕಳೆ, ಗಣೇಶ ಹೊರತಟ್ನಾಳ, ಕೀರ್ತಿ ಪಾಟೀಲ, ವಾಣಿಶ್ರೀ ಮಠದ, ಗೀತಾ ಮುತ್ಯಾಳ, ರಾಜು ವಸ್ತ್ರದ, ಪ್ರಾಣೇಶ ಮಾದಿನೂರು, ರಮೇಶ ಕುಣಿಕೇರಿ, ಉಮೇಶ ಕರ್ಡೇಕರ್, ಜೆಡಿಎಸ್ನ ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ, ಜಿಲ್ಲಾ ಉಪಾಧ್ಯಕ್ಷ ಮೂರ್ತೆಪ್ಪ ಹಿಟ್ನಾಳ್, ರಮೇಶ್ ಡಂಬ್ರಳ್ಳಿ, ಶಿವಕುಮಾರ್ ಏಣಿಗಿ, ರತ್ನಮ್ಮ ಹಿರೇಮಠ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಅಭಿವೃದ್ಧಿಗೆ ಜೈಕಾರ: ‘ದೇಶದ ಭದ್ರತೆ ಹಾಗೂ ಅಭಿವೃದ್ಧಿಯ ಭಾಗವಾಗಿ ಬಿಹಾರಿಗರು ಎನ್ಡಿಎ ಮೈತ್ರಿಕೂಟಕ್ಕೆ ಬಹುಮತ ನೀಡಿದ್ದಾರೆ. ಇದೊಂದು ಐತಿಹಾಸಿಕ ಕ್ಷಣ. ಅಲ್ಲಿನ ಜನ ಅಭಿವೃದ್ಧಿಗೆ ಜೈಕಾರ ಹಾಕಿದ್ದಾರೆ’ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಪ್ರತಿಕ್ರಿಯಿಸಿದ್ದಾರೆ.
ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಪತ್ರಿಕಾ ಹೇಳಿಕೆ ನೀಡಿದ್ದು ‘ಕಾಂಗ್ರೆಸ್ ಪಕ್ಷವನ್ನು ಬಿಹಾರದ ಮತದಾರರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಇದು ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆಯ ಗಂಟೆ. ಈಗಾಗಲೇ ಎರಡು ಬಣಗಳಾಗಿ ಒಡೆದ ಮನೆಯಂತಿರುವ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ. ರಾಜ್ಯದಲ್ಲಿ ಕಾಂಗ್ರೆಸ್ ಅಂತ್ಯದ ಕ್ಷಣಗಣನೆ ಆರಂಭವಾಗಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.