ಕುಷ್ಟಗಿ: ಪಟ್ಟಣದಲ್ಲಿ ಬಿಜೆಪಿ ಸಂಘಟಿಸಿದ್ದ ‘ಜನ ಸಂಕಲ್ಪಯಾತ್ರೆ’ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಹೊಸ ಹುರುಪು ಮೂಡಿಸಿದ್ದು ಕಂಡುಬಂತು.
ಪಟ್ಟಣ ಸೇರಿದಂತೆ ತಾಲ್ಲೂಕಿನ ಹಳ್ಳಿಗಳಿಂದ ಸಹಸ್ರ ಸಂಖ್ಯೆ ಅಭಿಮಾನಿಗಳು ಆಗಮಿಸಿದ್ದರು. ಪಕ್ಷದ ಬಾವುಟಗಳನ್ನು ಹಿಡಿದು, ಕೊರಳಲ್ಲಿ ಕಮಲದ ಶಾಲು ಹಾಕಿಕೊಂಡು ಯುವಕರು ಉತ್ಸಾಹದಿಂದ ಓಡಾಡುತ್ತಿದ್ದು ಕಂಡುಬಂತು.
ಎರಡು ತಾಸು ತಡವಾಗಿ ಆರಂಭಗೊಂಡಿತು. ಹವಾಮಾನ ವೈಪರೀತ್ಯದಿಂದ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಬಿ.ಎಸ್.ಯಡಿಯೂರಪ್ಪ ರಸ್ತೆ ಮಾರ್ಗದ ಮೂಲಕ ಪಟ್ಟಣಕ್ಕೆ ಬಂದರು. ಕಾರ್ಯಕ್ರಮದ ಆರಂಭಕ್ಕೆ ಮೊದಲೇ ಭಾರಿ ಸಿಡಿಲು ಗುಡುಗು, ಕಾರ್ಮೋಡದ ಅಬ್ಬರ ಕಂಡುಬಂತು.
ಅಭ್ಯರ್ಥಿ ಘೋಷಣೆ: ಹಾಲಿ ಮಾಜಿ ಮುಖ್ಯಮಂತ್ರಿಗಳು ಸೇರಿ ವೇದಿಕೆಯಲ್ಲಿ ಮಾತನಾಡಿದ ಎಲ್ಲರೂ ಬರುವ ವಿಧಾನಸಭೆ ಚುನಾವಣೆಗೆ ದೊಡ್ಡನಗೌಡ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಅನಿಶ್ಚಿತೆಗೆ ತೆರೆ ಎಳೆಯುತ್ತಿದ್ದಂತೆ ಸಭಾಂಗಣದಲ್ಲಿ ಹರ್ಷೋದ್ಗಾರ ಕೇಳಿಬಂದಿತು.
ಬಳಲಿದ ಬಿಎಸ್ಐ: ವೇದಿಕೆಯಲ್ಲಿ ಯಡಿಯೂರಪ್ಪ ಮಾತನಾಡುವಾಗ ಕೆಮ್ಮು ಅಡ್ಡಿಯಾಗುತ್ತಿತ್ತು. ಬಹಳಷ್ಟು ಬಳಲಿದಂತೆ ಕಂಡುಬಂದರೂ ಕಾಂಗ್ರೆಸ್ ಪಕ್ಷವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಹಾಲಿ, ಮಾಜಿ ಮುಖ್ಯಮಂತ್ರಿಗಳು ಪಕ್ಷದ ಸಂಘಟನೆಗಿಂತ ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದಕ್ಕೇ ವೇದಿಕೆಯನ್ನು ಹೆಚ್ಚಾಗಿ ಬಳಸಿಕೊಂಡರು. ಮುಖ್ಯಮಂತ್ರಿ ಸೇರಿ ವೇದಿಕೆಯಲ್ಲಿ ಮಾತನಾಡಿದವರೆಲ್ಲ ಕುರುಬ ಮತ್ತು ವಾಲ್ಮೀಕಿ ಸಮುದಾಯಗಳ ಅಭಿವೃದ್ಧಿಗೆ ಬದ್ಧ ಎಂದರು.
ಕಚೇರಿ ಉದ್ಘಾಟನೆ: ಕಾರ್ಯಕ್ರಮದ ನಂತರ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಪಟ್ಟಣದ ನಿವಾಸಕ್ಕೆ ತೆರಳಿದ ಬಸವರಾಜ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ ಅಲ್ಲಿಯೇ ಇದ್ದ ಪಕ್ಷದ ನೂತನ ಕಚೇರಿಯನ್ನು ಉದ್ಘಾಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.