ದಿನೇಶ್ ಗುಂಡೂರಾವ್
– ಪ್ರಜಾವಾಣಿ ಚಿತ್ರ
ಕುಷ್ಟಗಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಬಿಜೆಪಿ ಪದೇ ಪದೇ ಷಡ್ಯಂತ್ರ ನಡೆಸುತ್ತಿದೆ’ ಎಂದು ಸಚಿವ ದಿನೇಶ ಗುಂಡೂರಾವ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕುರಿತು ಅದೇ ರೀತಿ ವರ್ತಿಸುತ್ತಿದೆ. ಲಿಂಗಾಯತ ಅಥವಾ ಯಾವುದೇ ಸಮುದಾಯಗಳ ತಾತ್ವಿಕ ಭಿನ್ನಾಭಿಪ್ರಾಯಕ್ಕೂ ಸರ್ಕಾರದ ನಿರ್ಧಾರಕ್ಕೂ ಸಂಬಂಧವೇ ಇಲ್ಲ’ ಎಂದರು.
‘ಲಿಂಗಾಯತ ಸಮುದಾಯದಲ್ಲಿ ಧರ್ಮ, ಜಾತಿ ಉಪ ಪಂಗಡಗಳ ವಿಚಾರದಲ್ಲಿ ವ್ಯತ್ಯಾಸ ಆಗಿದ್ದರೂ ಅದೇನೂ ಅಂಥ ಸಮಸ್ಯೆ ಅಲ್ಲ. ಆದರೆ, ಅದೇ ವಿಷಯಕ್ಕೆ ಹೆಚ್ಚು ಪ್ರಚಾರ ಸಿಗುತ್ತಿದೆ’ ಎಂದರು.
‘ಸಮೀಕ್ಷೆಯು ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ಅವರ ಚಿಂತನೆಯಾಗಿದ್ದು, ಸರ್ಕಾರಕ್ಕೆ ಪ್ರತಿಷ್ಠೆಯ ಪ್ರಶ್ನೆಯೂ ಅಲ್ಲ. ಜನರ ಜಾತಿ, ಸಂಖ್ಯೆ ಧರ್ಮ, ಸ್ಥಿತಿಗತಿ ವಿವರಗಳನ್ನು ವೈಜ್ಞಾನಿಕ ತಳಹದಿಯಲ್ಲಿ ಮಾಹಿತಿ ಸಂಗ್ರಹಿಸಿದರೆ ಜನಕಲ್ಯಾಣ ಯೋಜನೆಗಳನ್ನು ರೂಪಿಸಲು ಸಾಧ್ಯ’ ಎಂದರು.
‘ಶಿಕ್ಷಕರಿಗೆ ಹೊರೆ ಆಗಬಾರದು ಎಂದು ರಜೆ ಅವಧಿಯನ್ನು ಸಮೀಕ್ಷೆಗೆ ಬಳಸಲಾಗುತ್ತಿದೆ. ಈ ಕುರಿತು ತರಾತುರಿ ಇಲ್ಲ. ಕೆಲ ಸಮುದಾಯಗಳ ವಿರೋಧವಿದೆ ಎಂಬುದೂ ಸುಳ್ಳು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.