ADVERTISEMENT

‘ಸಮಕಾಲೀನ ಸಮಸ್ಯೆಗಳ ಸಾಹಿತ್ಯ ಹೊರಬರಲಿ’

ಕಾದಂಬರಿ ಅವಲೋಕನದಲ್ಲಿ ಜಾಜಿ ದೇವೇಂದ್ರಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 16:10 IST
Last Updated 8 ಜೂನ್ 2025, 16:10 IST
ಕುಷ್ಟಗಿಯಲ್ಲಿ ‘ನೀಲಿ ಹೊತ್ತಿಗೆ’ ಕಾದಂಬರಿ ಅವಲೋಕನ ಕಾರ್ಯಕ್ರಮದಲ್ಲಿ ಜಾಜಿ ದೇವೇಂದ್ರಪ್ಪ, ಟಿ.ಎಸ್‌. ಗೊರವರ ಇತರರು ಹಾಜರಿದ್ದರು
ಕುಷ್ಟಗಿಯಲ್ಲಿ ‘ನೀಲಿ ಹೊತ್ತಿಗೆ’ ಕಾದಂಬರಿ ಅವಲೋಕನ ಕಾರ್ಯಕ್ರಮದಲ್ಲಿ ಜಾಜಿ ದೇವೇಂದ್ರಪ್ಪ, ಟಿ.ಎಸ್‌. ಗೊರವರ ಇತರರು ಹಾಜರಿದ್ದರು   

ಕುಷ್ಟಗಿ: ‘ಓದುಗನನ್ನು ತಲುಪಲು ದೊಡ್ಡ ಗಾತ್ರದ ಕಥೆ, ಕಾದಂಬರಿಗಳು ಪುಸ್ತಕಗಳ ಇರಬೇಕೆಂದೇನಿಲ್ಲ. ಅನುಗುಣವಾಗಿ ಚಿಕ್ಕ ಗಾತ್ರವಾಗಿದ್ದರೂ ಸರಿ ಸಮಕಾಲೀನ ವಿಷಯಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲು ಸಾಧ್ಯವಿದೆ. ಈ ನಾಡಿನಲ್ಲಿ ಅನೇಕ ದಿಗ್ಗಜರ ಅದ್ಭುತ ಕಾದಂಬರಿಗಳು ಹೊರಬಂದಿವೆ. ಅಂತಹ ಪುಸ್ತಕಗಳು ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತವೆ’ ಎಂದು ಸಿಂಧನೂರಿನ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಜಾಜಿ ದೇವೇಂದ್ರಪ್ಪ ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅಕ್ಷರ ಸಂಗಾತ ಪುಸ್ತಕ ಪ್ರಕಾಶನದ ಸಹಯೋಗದಲ್ಲಿ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕಿನ ನವಲಹಳ್ಳಿ ಗ್ರಾಮದ ಸಾಹಿತಿ ಮೌನೇಶ ನವಲಹಳ್ಳಿ ಅವರ ‘ನೀಲಿ ಹೊತ್ತಿಗೆ’ ಕಾದಂಬರಿ ಕೃತಿಯ ಅವಲಕೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಬದಲಾದ ಆಂಡ್ರಾಯಿಡ್ ಯಾಂತ್ರಿಕ ಜಗತ್ತಿನಲ್ಲಿ ದೊಡ್ಡ ಗಾತ್ರದ ಪುಸ್ತಕಗಳನ್ನು ಓದುವಷ್ಟು ತಾಳ್ಮೆ ಓದುಗರಲ್ಲಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ವೈವಿಧ್ಯಮಯ ವಿಷಯಗಳಿರುವ ಕೊಪ್ಪಳ ಜಿಲ್ಲೆ ಕಾದಂಬರಿಕಾರರಿಗೆ ಅತ್ಯಂತ ಪ್ರಶಸ್ತವಾಗಿದೆ. ದಶಕಗಳ ಹಿಂದೆಯೇ ಇಲ್ಲಿಯ ಅನೇಕ ಲೇಖಕರ ಕಾದಂಬರಿಗಳು ಹೆಸರುಗಳು ಉಲ್ಲೇಖಿತಗೊಂಡಿವೆ. ತಾಲ್ಲೂಕಿನಲ್ಲಿಯೂ ಹೊರ ಜಗತ್ತಿನ ಅರಿವಿಗೆ ಬಾರದ ಅನೇಕ ಭಿನ್ನಭಿನ್ನವಾದ ವಿಷಯಗಳಿವೆ. ಅಷ್ಟೇ ಸಶಕ್ತ ಬರಹಗಾರರೂ ಇಲ್ಲಿದ್ದಾರೆ’ ಎಂದು ವಿವರಿಸಿದರು.

ADVERTISEMENT

ಅಕ್ಷರ ಸಂಗಾತ ಸಾಹಿತ್ಯಿಕ ಪತ್ರಿಕ ಸಂಪಾದಕ ಟಿ.ಎಸ್‌. ಗೊರವರ, ಕೆ.ಶರಣಪ್ಪ ನಿಡಶೇಸಿ ಇತರರು ಕಾರ್ಯಕ್ರಮ ಕುರಿತು ಮಾತನಾಡಿದರು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲೆಂಕೆಪ್ಪ ವಾಲಿಕಾರ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಶೇಖರಗೌಡ ಸರನಾಡಗೌಡರ, ಬಿ.ಎ. ಕೆಂಚರಡ್ಡಿ, ಅಮರೇಗೌಡ ಜಾಲಿಹಾಳ, ನಬಿಸಾಬ ಕುಷ್ಟಗಿ, ಎಸ್‌.ಜಿ. ಕಡೇಮನಿ, ಶರಣಪ್ಪ ವಡಗೇರಿ, ಹನುಮೇಶ ಶೆಟ್ಟರ, ಜೀವನಸಾಬ ವಾಲೀಕಾರ, ರವೀಂದ್ರ ಬಾಕಳೆ, ಉಮೇಶ ಹಿರೇಮಠ ಇತರರು ಹಾಜರಿದ್ದರು.

ಮೌನೇಶ ನವಲಹಳ್ಳಿ ಸ್ವಾಗತಿಸಿದರು. ನಟರಾಜ ಸೋನಾರ ನಿರೂಪಿಸಿದರು. ಬರಹಗಾರರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.