ADVERTISEMENT

ಕೊಪ್ಪಳ |ಸಮೀಕ್ಷೆ ಪಟ್ಟಿಯಿಂದ ತೆಗೆದು ಹಾಕಲು ಬ್ರಾಹ್ಮಣ ಮಹಾಸಭಾ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 5:34 IST
Last Updated 17 ಸೆಪ್ಟೆಂಬರ್ 2025, 5:34 IST
ಕೊಪ್ಪಳದಲ್ಲಿ ಮಂಗಳವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿದರು
ಕೊಪ್ಪಳದಲ್ಲಿ ಮಂಗಳವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿದರು   

ಕೊಪ್ಪಳ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22ರಿಂದ ಎಲ್ಲ ಜಾತಿಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಯಲಿದ್ದು, ಪಟ್ಟಿಯಲ್ಲಿ ಬ್ರಾಹ್ಮಣ ಸಮುದಾಯದಲ್ಲಿ ಉಪಜಾತಿ ಸೇರಿಸಿದ್ದಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕ ವಿರೋಧ ವ್ಯಕ್ತಪಡಿಸಿದೆ. ಇದನ್ನು ಸರಿಪಡಿಸುವಂತೆ ಘಟಕದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿದರು.

ಜಾತಿ ಹಾಗೂ ಉಪಜಾತಿ ಪಟ್ಟಿಯಲ್ಲಿ ಕ್ರಮ ಸಂಖ್ಯೆ 209ರಲ್ಲಿ ಬ್ರಾಹ್ಮಣ ಕ್ರಿಶ್ಚಿಯನ್‌, 883ರಲ್ಲಿ ಬ್ರಾಹ್ಮಣ ಮುಜಾವರ ಮುಸ್ಲಿಂ, 1384ರಲ್ಲಿ ವೈಶ್ಯ ಬ್ರಾಹ್ಮಣ ಕ್ರಿಶ್ಚಿಯನ್‌ ಎಂದು ನಮೂದಿಸಿದ್ದು ಆಘಾತಕಾರಿ ವಿಷಯವಾಗಿದೆ. ಬ್ರಾಹ್ಮಣ ಸಮುದಾಯದಲ್ಲಿ ಯಾವುದೇ ಉಪಜಾತಿ ಇರುವುದಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಕ್ರಮಸಂಖ್ಯೆಯ ಉಪಜಾತಿ ವರ್ಗೀಕರಣ ತೆಗೆದು ಹಾಕಬೇಕು. ಉಪಪಂಗಡಗಳ ಕುರಿತು ಸಮಾಜದ ಮುಖಂಡರು ಹಾಗೂ ತಜ್ಞರ ಜೊತೆಗೆ ಚರ್ಚಿಸಿದ ಬಳಿಕವೇ ಹೊಸ ಪಟ್ಟಿ ತಯಾರಿಸಬೇಕು ಎಂದು ಮುಖಂಡರು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಬ್ರಾಹ್ಮಣ ಸಮುದಾಯದಲ್ಲಿ 64 ಉಪಜಾತಿಗಳಲ್ಲಿ ಎಲ್ಲ ಜಾತಿಗಳಲ್ಲಿಯೂ ಹಿಂದೂ ಬ್ರಾಹ್ಮಣ ಎಂದು ಪರಿಗಣಿಸಬೇಕು. ಬ್ರಾಹ್ಮಣರನ್ನು ಈಗಾಗಲೇ ಅತ್ಯಂತ ದುರ್ಬಲ ಹಾಗೂ ಸಂಖ್ಯಾಬಲದಲ್ಲಿ ಅತ್ಯಲ್ಪರು ಎಂದು ಕಾಣಿಸುವ ಹುನ್ನಾರ ನಡೆದಿದ್ದು, ಇದಕ್ಕೆ ಈಗಿನ ರಾಜ್ಯ ಸರ್ಕಾರದ ನಡೆ ಪುಷ್ಠಿ ನೀಡುವಂತಿದೆ. ಈ ರೀತಿಯ ಅಚಾತುರ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ.

ADVERTISEMENT

ಮಹಾಸಭಾದ ಜಿಲ್ಲಾ ಚುನಾಯಿತ ಪ್ರತಿನಿಧಿ ಗುರುರಾಜ ಎನ್‌. ಜೋಶಿ, ರಾಜ್ಯ ಉಪಾಧ್ಯಕ್ಷ ಕೆ.ಜಿ. ಕುಲಕರ್ಣಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ ಕುಲಕರ್ಣಿ, ರಾಜ್ಯ ಕೇಂದ್ರ ಕಾರ್ಯಕಾರಿಣಿ ಸದಸ್ಯ ಎಚ್‌.ಬಿ. ದೇಶಪಾಂಡೆ, ಸಮಾಜದ ಮುಖಂಡರಾದ ವೇಣುಗೋಪಾಲ ಜಹಗೀರದಾರ್, ಡಿ.ವಿ. ಜೋಶಿ, ನಾಗೇಶರಾವ್ ದೇಶಪಾಂಡೆ, ಕೃಷ್ಣ ಪದಕಿ, ಮಧುಸೂಧನ ಕುಲಕರ್ಣಿ, ವಿಶ್ವನಾಥ ದಿಕ್ಷೀತ್ ಸೇರಿದಂತೆ ಅನೇಕರು ಇದ್ದರು. 

ಮಹಾಸಭಾದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ ಅಚಾತುರ್ಯ ಎಸಗಿದವರ ವಿರುದ್ಧ ಕ್ರಮಕ್ಕೆ ಒತ್ತಾಯ ಉಪಜಾತಿ ವರ್ಗೀಕರಣ ತೆಗೆದು ಹಾಕಲು ಆಗ್ರಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.