ಕುಷ್ಟಗಿ: ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಸಕ್ರಿಯರಾಗಿ ಹುತಾತ್ಮರಾದ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ನಿರ್ಮಾಣಕ್ಕೆ ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಸಂಸ್ಮರಣಾ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.
ಈ ವಿಷಯ ಕುರಿತು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಅವರನ್ನು ಕುಕನೂರಿನಲ್ಲಿ ಭೇಟಿ ಮಾಡಿದ ಸಮಿತಿ ಪ್ರಮುಖರು ಮನವಿ ಸಲ್ಲಿಸಿದರು. ಅಲ್ಲದೆ ಸ್ವಾತಂತ್ರ್ಯ ಸೇನಾನಿಯಾಗಿದ್ದ ತಪಸ್ವಿ ಭೀಮಜ್ಜ ಮುರಡಿ ಅವರ ತಪೋಭೂಮಿಯನ್ನು ಅಭಿವೃದ್ಧಿಪಡಿ ಸುವಂತೆಯೂ ಸಚಿವರಿಗೆ ಮನವಿ ಮಾಡಿದರು. ಅದೇ ರೀತಿ ಸಾಹಿತಿ ರಾಮಣ್ಣ ಹವಳೆ ಬರೆದ ‘ಕೊಪ್ಪಳ ಜಿಲ್ಲೆ ಸ್ವಾತಂತ್ರ್ಯ ಹೋರಾಟ’ ಪುಸ್ತಕವನ್ನು ಕೊಪ್ಪಳ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಗ್ರಂಥಾಲಯಗಳು ಹಾಗೂ ಶಾಲೆಗಳಿಗೆ ತಲುಪಿಸುವ ಮೂಲಕ ಭವಿಷ್ಯದ ಯುವ ಪೀಳಿಗೆಗೆ ಹಾಗೂ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಓದಿ ತಿಳಿಯುವುದಕ್ಕೆ ಅನುಕೂಲ ಕಲ್ಪಿಸಬೇಕು ಎಂದರು. ಮನವಿ ಸ್ವೀಕರಿಸಿದ ಸಚಿವ ಹಾಲಪ್ಪ ಆಚಾರ,‘ಬೇಡಿಕೆ ಈಡೇರಿಸಲು ಪ್ರಯತ್ನಿಸುವ ಭರವಸೆ ನೀಡಿದರು. ಸ್ವಾತಂತ್ರ್ಯ ಹೋರಾಟಗಾರರ ಸಂಸ್ಮರಣಾ ಸಮಿತಿಯ ಅಮೃತರಾಜ ಜ್ಞಾನಮೋಟೆ, ವೀರೇಶ ಬಂಗಾರಶೆಟ್ಟರ್, ಮುಖೇಶ್ ನಿಲೋಗಲ್, ರವೀಂದ್ರ ಬಾಕಳೆ, ನಾಗರಾಜ್ ಮುರಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.