ADVERTISEMENT

ಕೊಪ್ಪಳ | ರೈಲ್ವೆ ಗೇಟ್‌ಗೆ ಬಸ್ ಡಿಕ್ಕಿ; ಹಲವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2023, 14:52 IST
Last Updated 27 ನವೆಂಬರ್ 2023, 14:52 IST
ಕೊಪ್ಪಳದಲ್ಲಿ ಸೋಮವಾರ ಬಸ್‌ ಡಿಕ್ಕಿ ಹೊಡೆದಿದ್ದರಿಂದ ಗಾಬರಿಯಾಗಿದ್ದ ಪ್ರಯಾಣಿಕರು
ಕೊಪ್ಪಳದಲ್ಲಿ ಸೋಮವಾರ ಬಸ್‌ ಡಿಕ್ಕಿ ಹೊಡೆದಿದ್ದರಿಂದ ಗಾಬರಿಯಾಗಿದ್ದ ಪ್ರಯಾಣಿಕರು   

ಕೊಪ್ಪಳ: ನಗರದ ಹೊರ ವಲಯದಲ್ಲಿರುವ ರೈಲ್ವೆ ಗೇಟ್‌ಗೆ ಸೋಮವಾರ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ.

ಚಾಲಕನ ನಿಯಂತ್ರಣ ತಪ್ಪಿ ಬಸ್ ಡಿಕ್ಕಿ ಹೊಡೆದಿದೆ. ಗಂಗಾವತಿಯಿಂದ ಕೊಪ್ಪಳ ನಗರಕ್ಕೆ ಬರುವಾಗ ಈ ಘಟನೆ ನಡೆದಿದ್ದು, ಬಸ್‌ನಲ್ಲಿದ್ದ 15ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ ಮುಂಭಾಗದ ಗಾಜು ಪುಡಿಪುಡಿಯಾಗಿದೆ.

ರೈಲ್ವೆ ಗೇಟ್ ದಾಟುವಾಗ ಹಳಿ ಮುಂಭಾಗದಲ್ಲಿ ಹಾಕಿರುವ ಕಬ್ಬಿಣದ ತಡಗೋಡೆಗೆ ಬಸ್ ಡಿಕ್ಕಿ ಹೊಡೆದಿದ್ದರಿಂದ ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದರು. ಗುದ್ದಿದ ರಭಸಕ್ಕೆ ಬಸ್ ಹಿಂದಕ್ಕೆ ಹೋಗಿ ಗುಂಡಿಯಲ್ಲಿ ಸಿಲುಕಿಕೊಂಡಿತ್ತು.

ADVERTISEMENT

ಕರಡಿಗಳ ದಾಳಿ: ವ್ಯಕ್ತಿಗೆ ಗಂಭೀರ ಗಾಯ

ಕೊಪ್ಪಳ: ತಾಲ್ಲೂಕಿನ ಇರಕಲ್ಲಗಡ ಸಮೀಪ ಒಬ್ಬಂಟಿಯಾಗಿ ಹೊರಟಿದ್ದ 42 ವರ್ಷದ ಈರಪ್ಪ ಜಾಲಿಗಿಡದ ಎಂಬ ವ್ಯಕ್ತಿಯ ಮೇಲೆ ನಾಲ್ಕು ಕರಡಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದು ವ್ಯಕ್ತಿಯ ದೇಹ ರಕ್ತಸಿಕ್ತವಾಗಿತ್ತು.

ಮೂಲತಃ ಬೇವೂರಿನ ಈರಪ್ಪ ಕೊಪ್ಪಳ ತಾಲ್ಲೂಕಿನ ಹೊಸೂರಿನಲ್ಲಿ ವಾಸವಾಗಿದ್ದ. ಗೌಂಡಿ ಕೆಲಸ ಮಾಡುತ್ತಿದ್ದ ಅವರು ಗೌರಿ ಹುಣ್ಣಿಮೆಯ ಅಂಗವಾಗಿ ಪಾದಯಾತ್ರೆ ಮೂಲಕ ಗವಿಸಿದ್ದೇಶ್ವರ ಮಠಕ್ಕೆ ಹೋಗುವಾಗ ದಾಳಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವರು ನೆರವಿಗಾಗಿ ಅಂಗಲಾಚುತ್ತಿದ್ದರುವುದನ್ನು ವಿಡಿಯೊ ಮಾಡಿರುವ ಕೆಲವರು ಅವರನ್ನು ಆಸ್ಪತ್ರೆಗೆ ದಾಖಲಿಸುವ ಬದಲು ಮಾಹಿತಿ ಸಂಗ್ರಹಿಸುತ್ತಿದ್ದ ಚಿತ್ರಣ ದೃಶ್ಯದಲ್ಲಿದೆ.

ಈ ಭಾಗದಲ್ಲಿ ಕರಡಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇದನ್ನು ಕರಡಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಅರಣ್ಯ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಸರ್ಕಾರ ಅನುಮೋದನೆ ನೀಡಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.