ADVERTISEMENT

ರಾಯರಡ್ಡಿ ಜನ ಸಂಪರ್ಕ ಸಭೆ ವೇಳೆ ಗಲಾಟೆ

ಆರು ಜನ ಪೊಲೀಸ್ ವಶಕ್ಕೆ, ಮೂವರು ಪೊಲೀಸರ ಅಮಾನತು

​ಪ್ರಜಾವಾಣಿ ವಾರ್ತೆ
Published 22 ಜೂನ್ 2023, 20:36 IST
Last Updated 22 ಜೂನ್ 2023, 20:36 IST
   

ಕುಕನೂರು: ತಾಲ್ಲೂಕಿನ ಬಟಪನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಜನ ಸಂಪರ್ಕ ಸಭೆ ವೇಳೆ ಶಾಸಕ ಬಸವರಾಜ ರಾಯರಡ್ಡಿ ಜತೆ ಗಲಾಟೆ ಮಾಡಿದ ಆರು ಜನರನ್ನು ಕುಕನೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕರ್ತವ್ಯ ಲೋಪ ಎಸಗಿದ ಕಾರಣಕ್ಕಾಗಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಸಭೆಯಲ್ಲಿ ರಾಯರಡ್ಡಿ ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆದು, ತಾರಕಕ್ಕೇರಿತು. ಸಾರ್ವಜನಿಕ ಶೌಚಾಲಯ ಕಟ್ಟಿಸಿ ಕೊಡುವ ವಿಚಾರದಲ್ಲಿ ಈ ಘಟನೆ ‌ನಡೆದಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಶಾಸಕರು ಸಾರ್ವಜನಿಕ ಶೌಚಾಲಯ ಕಟ್ಟಿಸುವುದಿಲ್ಲ. ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳಿ ಎಂದು ಹೇಳಿದಾಗ ಕೆಲವು ಗ್ರಾಮಸ್ಥರು ಅದನ್ನು ವಿರೋಧಿಸಿ ಶಾಸಕರ ಕಾರು ಗುದ್ದಿದ್ದು ಶಾಸಕರ ಹಾಗೂ ಕೆಲವು ಗ್ರಾಮದ ಯುವಕರ ನಡುವೆ ವಾಗ್ವಾದ ನಡೆಯಿತು.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರು ಜನ ಯುವಕರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಪ್ರಕರಣ ದಾಖಲಾಗಿದೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ‘ಶಾಸಕರ ಜನಸಂಪರ್ಕ ಸಭೆಗೆ ತೆರಳದೇ ಕರ್ತವ್ಯ ಲೋಪವೆಸಗಿದ ಎಎಸ್ಐ ವಿರೂಪಯ್ಯ, ಪೊಲೀಸ್ ಸಿಬ್ಬಂದಿ ವಿಶ್ವನಾಥ ಹಾಗೂ ಹನುಮಂತ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.