ಯಲಬುರ್ಗಾ: ವಸತಿ ನಿಲಯದ ಆವರಣ ಹಾಗೂ ಅಲ್ಲಿಯ ಶೌಚಾಲಯವನ್ನು ಸ್ವಚ್ಛಗೊಳಿಸಿ ಇತರರಿಗೆ ಮಾದರಿಯಾಗುವ ರೀತಿಯಲ್ಲಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವಿ.ಕೆ. ಬಡಿಗೇರ ನಡೆದುಕೊಂಡಿದ್ದಾರೆ.
ತಾಲ್ಲೂಕಿನ ಹಿರೇಅರಳಿಹಳ್ಳಿ ಗ್ರಾಮದ ಮೆಟ್ರಿಕ್ ಪೂರ್ವ ವಸತಿ ನೀಲಯಕ್ಕೆ ಸೋಮವಾರ ಭೇಟಿ ನೀಡಿದ ಸಂದರ್ಭದಲ್ಲಿ ಕೈಯಲ್ಲಿ ಪೊರಕಿ ಹಿಡಿದು ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.
ಇದನ್ನು ಗಮನಿಸಿದ ಇತರೆ ಸಿಬ್ಬಂದಿ ಅವರೊಂದಿಗೆ ಕೈ ಜೋಡಿಸಿ ಸಂಪೂರ್ಣ ಸ್ವಚ್ಛಮಾಡಿದರು.
ನಂತರ ಮಾತನಾಡಿದ ಅಧಿಕಾರಿ ವಿ.ಕೆ. ಬಡಿಗೇರ, ವಾಸಿಸುವ ಪರಿಸರ, ಮುಖ್ಯವಾಗಿ ಶೌಚಾಲಯ ಪ್ರದೇಶವು ಮಾತ್ರ ಸಂಪೂರ್ಣ ಸ್ವಚ್ಛತೆಯಿಂದ ಇರುವಂತೆ ನೋಡಿಕೊಳ್ಳಬೇಕು. ನಿಲಯಪಾಲಕರು, ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳು ಪ್ರತಿಯೊಬ್ಬರ ಸಹಭಾಗಿತ್ವದಿಂದ ಅಭಿವೃದ್ಧಿ ಸಾಧ್ಯ ಎಂಬುದನ್ನು ಯಾರು ಮರೆಯುವಂತಿಲ್ಲ ಎಂದ ಅವರು ಕೊನೆಗೆ ಮಕ್ಕಳಿಗೆ ಪ್ರತಿಜ್ಞಾವಿಧಿ
ಬೋಧಿಸಿದರು.
ವಸತಿ ನಿಲಯದ ಮೇಲ್ವಿಚಾರಕ ವೀರಯ್ಯ ಕಾಟಾಪೂರಮಠ ಮಾತನಾಡಿ, ಅಧಿಕಾರಿಗಳೇ ಸ್ವಚ್ಛತೆಗೆ ಮುಂದಾಗಿದ್ದು ಇತರೆ ಸಿಬ್ಬಂದಿಗೆ ಪ್ರೇರಣೆಯಾಗಿದೆ. ಅಧಿಕಾರಿಗಳ ಕ್ರಿಯಾಶೀಲ ವ್ಯಕ್ತಿತ್ವ ನಮಗೂ ಪ್ರೇರಣೆಯಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಿ ವಸತಿ ನಿಲಯದಲ್ಲಿ ಉತ್ತಮ ವಾತಾವರಣ ನೆಲೆಗೊಳ್ಳುವಂತೆ ಮಾಡಲಾಗುವುದು ಎಂದು ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.