ಗಂಗಾವತಿ: ರಾಜ್ಯ ಮಟ್ಟದ ಕ್ರೀಡೆಯನ್ನು ಗ್ರಾಮದಲ್ಲಿ ನಡೆಸುವುದು ಸುಲಭ ಮಾತಲ್ಲ. ಆದರೆ, ನಮ್ಮೂರಿನ ಯುವಕರು ಆ ಸಾಹಸವನ್ನು ಮಾಡಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಮರೇಶ್ ಗೋನಾಳ್ ಹೇಳಿದರು.
ತಾಲ್ಲೂಕಿನ ಹೇರೂರು ಗ್ರಾಮದಲ್ಲಿ ಮಂಗಳವಾರ ಸ್ವಾಮಿ ವಿವೇಕಾನಂದ ಗ್ರಾಮೀಣ ಅಭಿವೃದ್ಧಿ ಹಾಗೂ ಶಿಕ್ಷಣ ಕಲಾ ಸಾಂಸ್ಕೃತಿಕ ಕ್ರೀಡಾ ಸಂಸ್ಥೆ ಹೇರೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಓಪನ್ ಮ್ಯಾಟ್ ಕೊಕ್ಕೊ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಕೊಕ್ಕೊ ಕ್ರೀಡೆಗೆ ಹೇರೂರು ಹೆಸರುವಾಸಿ, ಇಲ್ಲಿನ ಕೊಕ್ಕೊ ಆಟಗಾರರು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.
ವಕೀಲರಾದ ಚನ್ನಪ್ಪ ಮಳಿಗಿ ಮಾತನಾಡಿ, ಕ್ರೀಡೆಯಲ್ಲಿ ಗೆಲುವು ಮುಖ್ಯವಲ್ಲ ಅದರಲ್ಲಿ ಭಾಗವಹಿಸುವುದು ಮುಖ್ಯ. ಕ್ರೀಡೆಯಿಂದ ಸ್ಪರ್ಧಿಗಳು ತಮ್ಮ ಮಾನಸಿಕ ಮತ್ತು ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಟೂರ್ನಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 18 ತಂಡಗಳು ಆಗಮಿಸಿದ್ದು, ಎರಡು ದಿನಗಳ ಕಾಲ ಈ ಟೂರ್ನಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಎಂಪಿಎಂಸಿ ಉಪಾಧ್ಯಕ್ಷೆ ಸುಶೀಲಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹುಲಿಗೆಮ್ಮ, ಸದಸ್ಯರಾದ ಶಶಿಧರ ಗೌಡ, ಹನುಮೇಶ್, ನಾಗಪ್ಪ ತಳವಾರ, ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್, ಧೀರ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವಿರುಪಾಕ್ಷಿಗೌಡ ನಾಯಕ, ಪ್ರಮುಖರಾದ ನಾಗರಾಜ, ಪಂಪಾಪತಿ, ಸೇರಿದಂತೆ ಸ್ವಾಮಿ ವಿವೇಕಾನಂದ ಸಂಘದ ಯುವಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.