ಕುಷ್ಟಗಿ: ನೀತಿ ಸಂಹಿತೆ ಜಾರಿಯಲ್ಲಿದ್ದರೂ ಲೋಕಸಭೆ ಚುನಾವಣೆಯಲ್ಲಿನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪಟ್ಟಣದ ದ್ಯಾಮವ್ವ ದೇವಸ್ಥಾನಕ್ಕೆ ₹ 1 ಲಕ್ಷ ನಗದು ಹಣವನ್ನು ದೇಣಿಗೆ ನೀಡಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ.
ಹಣವನ್ನು ದೇವಸ್ಥಾನದ ಸಮಿತಿಯವರಿಗೆ ಈಚೆಗೆ ಹಸ್ತಾಂತರಿಸಿರುವುದಕ್ಕೆ ಸಾಕ್ಷ್ಯ ಒದಗಿಸುವಂತೆ ಕಾಂಗ್ರೆಸ್ ಪಕ್ಷದ ಇಲ್ಲಿಯ ಮುಖಂಡರು ಅದನ್ನು ಏ.24ರಂದು ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಅಷ್ಟೇ ಅಲ್ಲ ಮೊದಲು ರಾಜಶೇಖರ ಹಿಟ್ನಾಳ ನೀಡಿರುವ ಹಣವನ್ನು ಹಸ್ತಾಂತರಿಸಲಾಗಿದೆ ಎಂದು ಚಿತ್ರ ಸಹಿತ ಮಾಹಿತಿ ಹಂಚಿಕೊಂಡಿದ್ದ ಕಾಂಗ್ರೆಸ್ ಬೆಂಬಲಿಗರು ಕೆಲ ಗಂಟೆಗಳ ನಂತರ ಅದನ್ನು ತಿದ್ದುಪಡಿ ಮಾಡಿ ರಾಜಶೇಖರ ಹಿಟ್ನಾಳ ಹೆಸರಿನ ಬದಲು ರಾಘವೇಂದ್ರ ಹಿಟ್ನಾಳ ಎಂದು ಬರೆದುಕೊಂಡಿದ್ದಾರೆ.
ಡಿಸಿ ಹೇಳಿದ್ದು: ಇದು ಚುನಾವಣೆಯ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಷಯ ಕುರಿತು ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ ಅವರನ್ನು ಸಂಪರ್ಕಿಸಿದಾಗ ‘ಅಂಥ ಯಾವುದೇ ಮಾಹಿತಿ ಗಮನಕ್ಕೆ ಬಂದಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುವ ವಿಷಯಗಳ ಪರಿಶೀಲನೆಗೆಂದೇ ತಂಡ ರಚಿಸಲಾಗಿರುತ್ತದೆ, ಅವರಿಂದ ದೂರು ಬಂದರೆ, ನೀತಿ ಸಂಹಿತೆ ಉಲ್ಲಂಘನೆಯಾಗುವುದಾದರೆ ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.
ಆದರೆ ಈ ವಿಷಯ ಕುರಿತು ಸಹಾಯಕ ಚುನಾವಣಾಧಿಕಾರಿ ರೇಷ್ಮಾ ಹಾನಗಲ್ ಯಾವುದೇ ಮಾಹಿತಿ ನೀಡಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.