ಗಂಗಾವತಿ: ತಾಲ್ಲೂಕಿನ ಶ್ರೀರಾಮನಗರದಲ್ಲಿ ಮತ್ತೆ ಮೂರು ಹೊಸ ಕೋವಿಡ್ ಪ್ರಕರಣಗಳು ಶುಕ್ರವಾರ ದೃಢಪಟ್ಟಿದ್ದು, ಶ್ರೀರಾಮನಗರದ ಒಂದೇ ಮನೆಯಲ್ಲಿ ಮೂವರಿಗೆ ಕೊರೊನಾ ಸೋಂಕು ತಗುಲಿದೆ.
ಶ್ರೀರಾಮನಗರದ ಒಂದೇ ಕುಟುಂಬದ 45 ವರ್ಷದ ಪತಿ, 40 ವರ್ಷದ ಪತ್ನಿ, 17 ವರ್ಷದ ಮಗಳಿಗೆ ಕೋವಿಡ್ ವೈರಸ್ ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮೂವರನ್ನು ಕೊಪ್ಪಳದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸಂಪರ್ಕದಲ್ಲಿದ್ದ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕಿತರನ್ನು ಈಗಾಗಲೇ ತಾಲ್ಲೂಕು ಆಡಳಿತ ಪತ್ತೆ ಹಚ್ಚುತ್ತಿದೆ.
ಸೋಂಕಿತರು ಕಳೆದ ಮೂರು ದಿನಗಳ ಹಿಂದೆಯಷ್ಟೇ ಆಂಧ್ರ ಪ್ರದೇಶದ ವಿಜಯವಾಡಕ್ಕೆ ತೆರಳಿ ಮದುವೆ ಮುಗಿಸಿಕೊಂಡು ಗ್ರಾಮಕ್ಕೆ ಆಗಮಿಸಿದ್ದರು. ಗ್ರಾಮಕ್ಕೆ ಬಂದ ನಂತರ ಅನಾರೋಗ್ಯದಿಂದ ಬಳುತ್ತಿದ್ದ ಕಾರಣ ಇವರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಗ್ರಾಮಕ್ಕೆ ಶುಕ್ರವಾರ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಸೋಂಕಿತರ ಮನೆಯ ಸುತ್ತಲೂ 50 ಮೀಟರ್ ಕಂಟೈನ್ಮೆಂಟ್ ಝೋನ್ ಆಗಿ, 200 ಮೀಟರ್ ಬಫರ್ ಝೋನ್ ಆಗಿ ಸೀಲ್ ಡೌನ್ ಮಾಡಿದ್ದಾರೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬದವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದ್ದು, ಗ್ರಾಮದ ಪ್ರಮುಖ ರಸ್ತೆಗಳಿಗೆ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಲಾಗಿದೆ.
ಎರಡು ದಿನಗಳ ಹಿಂದೆಯಷ್ಟೇ ಶ್ರೀರಾಮನಗರದಲ್ಲಿ ಉಡುಪಿಯ ಕುಂದಾಪುರದಿಂದ ಆಗಮಿಸಿದ ಟೀ ಮಾರುವ ವ್ಯಕ್ತಿಗೆ ಕೋವಿಡ್ ವೈರಸ್ ಇರುವುದು ದೃಡಪಟ್ಟಿತ್ತು. ಇದರೊಂದಿಗೆ ಗ್ರಾಮದಲ್ಲಿ ನಾಲ್ವರಿಗೆ ಸೋಂಕು ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.