ಕುಷ್ಟಗಿ: ರಸ್ತೆ ಪಕ್ಕದ ಮನೆಗೆ ಲಾರಿ ನುಗ್ಗಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು ಒಂದೇ ಕುಟುಂಬದ ನಾಲ್ವರು ಗಾಯಗೊಂಡಿರುವ ಪ್ರಕರಣ ತಾಲ್ಲೂಕಿನ ಗುಮಗೇರಿ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಬಸಮ್ಮ ಲಕ್ಷ್ಮಣ ಗಿರಣಿ (45) ಮೃತ ಮಹಿಳೆ. ಲಕ್ಷ್ಮಣ ಗಿರಣಿ, ಮರಕಟ್ಟು ಗ್ರಾಮಕ್ಕೆ ಸೇರಿದ 3 ವರ್ಷದ ಬಾಲಕ ನಾಗರಾಜ, ಮಂಜುಳಾ ಗಿರಣಿ ಮತ್ತು ರೇಖಾ ಗಿರಣಿ ಎಂಬುವವರು ಗಾಯಗೊಂಡಿದ್ದಾರೆ. ಇವರಲ್ಲಿ ಲಕ್ಷ್ಮಣ ಮತ್ತು ಬಾಲಕ ನಾಗರಾಜ ಎಂಬುವವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಬಾಗಲಕೋಟೆಯ ಖಾಸಗಿ ಮತ್ತು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ತೆರಳಿದ ಪೊಲೀಸರು ಗ್ರಾಮಸ್ಥರ ಸಹಕಾರದೊಂದಿಗೆ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೇಸಿಗೆಯಾಗಿದ್ದರಿಂದ ಐವರು ಮನೆಯ ಮುಂದಿನ ಬಯಲಿನಲ್ಲಿ ಮಲಗಿದ್ದರು. ಬಾಗಲಕೋಟೆಯಿಂದ ಸಿಂಧನೂರು ಕಡೆಗೆ ತೆರಳುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಗ್ರಾಮದ ಪಕ್ಕದ ಮನೆಯತ್ತ ನುಗ್ಗಿದೆ.
ಪರಿಶಿಷ್ಟ ಜಾತಿಗೆ ಸೇರಿದ ಈ ಕುಟುಂಬದವರು ಕೂಲಿಕಾರರಾಗಿದ್ದು ಬಡತನದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಗ್ರಾಮದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.