ADVERTISEMENT

ವಿದ್ಯುತ್‌ ಸ್ಪರ್ಶ: ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 15:43 IST
Last Updated 2 ಜೂನ್ 2020, 15:43 IST
ಯಮನೂರಪ್ಪ
ಯಮನೂರಪ್ಪ   

ಕುಷ್ಟಗಿ: ವಿದ್ಯುತ್‌ ಸ್ಪರ್ಶಿಸಿ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಪಟ್ಟಣದ ಕೃಷ್ಣಗಿರಿ ಕಾಲೊನಿಯಲ್ಲಿ ಮಂಗಳವಾರ ನಡೆದಿದೆ.

ಯಮನೂರಪ್ಪ ಹನುಮಂತಪ್ಪ ಸಂಗಟಿ (15) ಮೃತ ಬಾಲಕ.

ಶಾಂತಲಿಂಗಪ್ಪ ಸೂಡಿ ಎಂಬುವವರಿಗೆ ಸೇರಿದ ಶಿವು ಪೇಪರ್ ಪ್ಲೇಟ್‌ ಮೇಕರ್ಸ್ ಘಟಕದಲ್ಲಿ ಈ ಬಾಲಕ ಕೆಲಸ ಮಾಡುತ್ತಿದ್ದ. ಯಂತ್ರಕ್ಕೆ ಅಳವಡಿಸಿದ ವಿದ್ಯುತ್‌ ಪ್ರವಹಿಸುತ್ತಿದ್ದ ವೈರ್ ತಾಗಿ ಅಸ್ವಸ್ಥಗೊಂಡಿದ್ದ. ಅಲ್ಲಿಯೇ ಇದ್ದ ಆತನ ಸಹೋದರ ಕೂಡಲೇ ಆತನನ್ನು ಕರೆದೊಯ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಬಾಲಕ ಮೃತಪಟ್ಟಿದ್ದನ್ನು ವೈದ್ಯರು ದೃಢಪಡಿಸಿದರು.

ADVERTISEMENT

ಕೆಲಸದ ವೇಳೆ ಮಾಲೀಕರು ಬಾಲಕನಿಗೆ ಯಾವುದೇ ಜೀವರಕ್ಷಕ ಸಲಕರಣೆ ಒದಗಿಸಿರಲಿಲ್ಲ, ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಬಾಲಕನ ದೊಡ್ಡಪ್ಪ ದುರಗಪ್ಪ ಸಂಗಟಿ ಎಂಬುವವರು ನೀಡಿದ ದೂರಿನ ಅನ್ವಯ ಇಲ್ಲಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಡ ಕುಟುಂಬಕ್ಕೆ ಸೇರಿದ ಈ ಬಾಲಕ ಕೆಲ ದಿನಗಳಿಂದ ತನ್ನ ಅಕ್ಕ, ಅಣ್ಣನೊಂದಿಗೆ ಪೇಪರ್‌ ಪ್ಲೇಟ್‌ ಘಟಕಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಆಸ್ಪತ್ರೆ ಬಳಿ ಮೃತ ಬಾಲಕನ ಪಾಲಕರು ಮತ್ತು ಸಂಬಂಧಿಕರ ರೋದನ ಸುತ್ತಲಿನ ಜನರ ಕಣ್ಣಾಲೆಗಳನ್ನು ತೇವಗೊಳಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.