ADVERTISEMENT

ಮೈಲಾಪುರ: ಮೊಸಳೆ ಪತ್ತೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 9:52 IST
Last Updated 21 ಜನವರಿ 2020, 9:52 IST
ಕಾರಟಗಿ ತಾಲ್ಲೂಕಿನ ಮೈಲಾಪುರ ಗ್ರಾಮದ ತುಂಗಭದ್ರ ಎಡದಂಡೆ ಮುಖ್ಯನಾಲೆಯ ಪಕ್ಕದ ಜಮೀನಿನಲ್ಲಿ ಅಡಗಿದ್ದ ಮೊಸಳೆಯನ್ನು ಭಾನುವಾರ ಹಿಡಿಯಲಾಯಿತು
ಕಾರಟಗಿ ತಾಲ್ಲೂಕಿನ ಮೈಲಾಪುರ ಗ್ರಾಮದ ತುಂಗಭದ್ರ ಎಡದಂಡೆ ಮುಖ್ಯನಾಲೆಯ ಪಕ್ಕದ ಜಮೀನಿನಲ್ಲಿ ಅಡಗಿದ್ದ ಮೊಸಳೆಯನ್ನು ಭಾನುವಾರ ಹಿಡಿಯಲಾಯಿತು   

ಕಾರಟಗಿ: ತಾಲ್ಲೂಕಿನ ಮೈಲಾಪುರ ಗ್ರಾಮದ ತುಂಗಭದ್ರಾ ಎಡದಂಡೆ ಮುಖ್ಯನಾಲೆಯಲ್ಲಿ ಶನಿವಾರ ಮೊಸಳೆ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿತ್ತು.

ಮುಖ್ಯನಾಲೆಯ ಪಕ್ಕದ ಮಲ್ಲಿಕಾರ್ಜುನಗೌಡ ಎಂಬ ರೈತರ ಜಮೀನಿನಲ್ಲಿ ಅಡಗಿದ್ದ ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಮೊಸಳೆಯನ್ನು ಹಿಡಿದರು.
ತುಂಗಭದ್ರ ಎಡದಂಡೆ ಮುಖ್ಯನಾಲೆಯ ಮೈಲಾಪುರ ಗ್ರಾಮದ ಬಳಿ ಶನಿವಾರ ಕಾಣಿಸಿಕೊಂಡಿದ್ದ ಮೊಸಳೆಯ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು.

ಭಾನುವಾರ ಸ್ಥಳಕ್ಕೆ ಧಾವಿಸಿದ ಉಪ ವಲಯ ಅರಣ್ಯಾಧಿಕಾರಿ ವೀರೇಶ ನಾಯಕ, ಅರಣ್ಯ ರಕ್ಷಕರಾದ ಆದೇಶ, ಮಂಜುನಾಥ, ಅರಣ್ಯ ವೀಕ್ಷಕ ನಾಗರಾಜ ನೇತೃತ್ವದ ತಂಡ ಗ್ರಾಮಸ್ಥರ ಸಹಕಾರದೊಂದಿಗೆ ಮೊಸಳೆ ಪತ್ತೆಗೆ ಪರಿಶ್ರಮಿಸಿತು.

ADVERTISEMENT

ಹುಡುಕಾಟದ ಬಳಿಕವೂ ಮೊಸಳೆ ಸಿಗಲಿಲ್ಲ. ಮೊಸಳೆ ಪತ್ತೆಯಾದ ಕಾಲುವೆ ಸ್ಥಳಕ್ಕೆ ಭೇಟಿ ನೀಡಿ ಮೊಸಳೆಯ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಲಾಯಿತು.

ಕಾಲುವೆ ಪಕ್ಕದ ಜಮೀನು ಪ್ರವೇಶ ಮಾಡಿರುವ ಶಂಕೆ ವ್ಯಕ್ತವಾಯಿತು. ಜಮೀನಿನಲ್ಲಿ ಅಧಿಕಾರಿಗಳು ಹಾಗೂ ಗ್ರಾಮಸ್ಥರ ತಂಡ ಶೋಧ ನಡೆಸಿದ ಬಳಿಕ ಮೊಸಳೆ ಪತ್ತೆಯಾಯಿತು.

ಮೊಸಳೆಯನ್ನು ಕೊನೆಗೂ ಹಿಡಿದು, ವಾಹನದಲ್ಲಿ ವಲಯ ಅರಣ್ಯ ಇಲಾಖೆ ಕಚೇರಿಗೆ ತೆಗೆದುಕೊಂಡು ಹೋಗಲಾಯಿತು.
ಮೈಲಾಪುರ ಗ್ರಾಮದ ಸಮೀಪವೇ ಮೊಸಳೆ ಪತ್ತೆಯಾಗಿದ್ದರಿಂದ ಕಾಲುವೆ ಪಕ್ಕದ ರೈತರು ಹಾಗೂ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದರು.

ಹಿಡಿದಿರುವ ಮೊಸಳೆಗೆ ಅಂದಾಜು 1ವರ್ಷ ಇದ್ದು, ಮುಖ್ಯನಾಲೆಯಲ್ಲಿ ಎಲ್ಲಿಂದಲೋ ಹರಿದುಬಂದಿರುವ ಶಂಕೆ ಇದೆ. ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಮೊಸಳೆಯನ್ನು ಪ್ರಾಣಿ ಸಂಗ್ರಹಾಲಯ ಅಥವಾ ಜಲಾಶಯ ಹಿನ್ನಿರಿಗೆ ಬಿಡುವ ಸಾಧ್ಯತೆಯಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ವೀರೇಶ ನಾಯಕ
ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.