ಗಂಗಾವತಿ (ಕೊಪ್ಪಳ ಜಿಲ್ಲೆ): ತುಂಗಭದ್ರಾ ಜಲಾಶಯದ ಕ್ರಸ್ಟ್ಗೇಟ್ ಕೊಚ್ಚಿ ಹೋಗಿರುವುದರಿಂದ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡಲಾಗಿದ್ದು, ತಾಲ್ಲೂಕಿನ ಆನೆಗೊಂದಿ ಗ್ರಾಮದ ಬಳಿ ಇರುವ ಕೃಷ್ಣದೇವರಾಯ ಸಮಾಧಿಯ 64 ಸಾಲಿನ ಕಲ್ಲಿನ ಮಂಟಪ ಮುಳುಗುವ ಹಂತ ತಲುಪಿದೆ.
ಕೆಲವು ದಿನಗಳ ಹಿಂದೆ ಜಲಾಶಯಕ್ಕೆ ವ್ಯಾಪಕ ನೀರು ಹರಿದು ಬಂದು ನದಿಗೆ ನೀರು ಹರಿಸಿದ್ದಾಗ ಇದು ಮುಳುಗಡೆಯಾಗಿತ್ತು. ಕ್ರಸ್ಟ್ಗೇಟ್ ಈಗ ಮರಳಿ ಅಳವಡಿಸಬೇಕಾಗಿರುವ ಕಾರಣ ಜಲಾಶಯದ 61 ಟಿಎಂಸಿ ಅಡಿ ನೀರನ್ನು ಖಾಲಿ ಮಾಡಬೇಕಾಗಿದೆ. ಹೀಗಾಗಿ ನೀರು ಹರಿಸಲಾಗುತ್ತಿದ್ದು, ಈಗಲೂ ಮಂಟಪ ಮುಳುಗುವ ಸ್ಥಿತಿಗೆ ತಲುಪಿದೆ. ಆನೆಗೊಂದಿ ಗ್ರಾಮದಿಂದ ನವವೃಂದಾವನ ಗಡ್ಡೆಗೆ ಹೋಗುವ ಮಾರ್ಗ, ವಿರೂಪಾಪುರಗಡ್ಡೆ, ಋಷಿಮುಖ ಪರ್ವತ ಮತ್ತು ತಳವಾರಘಟ್ಟದಿಂದ ಹಂಪಿಗೆ ತೆರಳುವ ಮಾರ್ಗದ ಸಂಚಾರ ರದ್ದಾಗಿದೆ.
ನಿರ್ಬಂಧ ವಿಸ್ತರಣೆ: ಗಂಗಾವತಿ ಮತ್ತು ವಿಜಯನಗರ ಜಿಲ್ಲೆಯ ಕಂಪ್ಲಿ ನಡುವೆ ಸಂಪರ್ಕ ಬೆಸೆಯುವ ಕಂಪ್ಲಿ ಸೇತುವೆ ಮೇಲೆ ವಾಹನಗಳ ಹಾಗೂ ಪಾದಚಾರಿಗಳ ಸಂಚಾರ ನಿರ್ಬಂಧ ವಿಸ್ತರಣೆಯಾಗಿದೆ.
ಕಂಪ್ಲಿ ಸೇತುವೆ ಮೇಲೆ ಜಲಾಶಯದ ನೀರು ಹರಿದಿದ್ದರಿಂದ ಜು.26ರಂದು ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಮೂರು ದಿನಗಳ ಹಿಂದೆಯಷ್ಟೇ ಪಾದಚಾರಿಗಳ ಓಡಾಟಕ್ಕೆ ನೀಡಲಾಗಿದ್ದ ಅನುಮತಿಯನ್ನು ಈಗ ರದ್ದುಪಡಿಸಲಾಗಿದೆ.
ಈ ಸೇತುವೆಯ ಗುಣಮಟ್ಟ ಪರೀಕ್ಷೆ ನಡೆಯುತ್ತಿದ್ದು, ವರದಿ ಬಂದ ಬಳಿಕವಷ್ಟೇ ಸೇತುವೆ ಬಳಕೆಗೆ ಅವಕಾಶ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಗಂಗಾವತಿ ಹಾಗೂ ಕಂಪ್ಲಿ ನಡುವೆ 10 ಕಿ.ಮೀ ಅಂತರವಿದೆ. ಸೇತುವೆ ಬಳಕೆಗೆ ಈಗ ನಿರ್ಬಂಧ ಹೇರಿರುವ ಕಾರಣ ಕಡೇಬಾಗಿಲು ಮಾರ್ಗದ ಮೂಲಕ 30 ಕಿ.ಮೀ ಸುತ್ತಿಕೊಂಡು ಈ ಎರಡು ಊರುಗಳಿಗೆ ಸಂಚರಿಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.