ಕೊಪ್ಪಳ: ‘ಜಿಲ್ಲೆಯಲ್ಲಿ ಸಾಕಷ್ಟು ಐತಿಹಾಸಿಕ ಪ್ರವಾಸಿ ತಾಣಗಳು, ದೇವಸ್ಥಾನಗಳು, ಸ್ಮಾರಕಗಳು ಇದ್ದು ಅವುಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕಿದೆ’ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಡೆದ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳ ಬಳಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನ ಸಭೆ ನಡೆಸಿ ಅವರು ಮಾತನಾಡಿದರು.
‘ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಮೊದಲನೇ ಹಂತದಲ್ಲಿ ಮಂಜೂರಾದ ಮತ್ತು ಎರಡನೇ ಹಂತದಲ್ಲಿ ಅನುಮೋದನೆಯಾದ ಕಾಮಗಾರಿಗಳು ಅನುಷ್ಠಾನಗೊಳಿಸಲು 93 ಎಕರೆ 15 ಗುಂಟೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮರು ಪ್ರಸ್ತಾವನೆ ಸಲ್ಲಿಸಬೇಕಿದೆ. ಹಾಗೇ ಅಂಜನಾದ್ರಿ ಬೆಟ್ಟದ ಮುಂಭಾಗ, ಹಿಂಭಾಗ ಥೀಮ್ ಆಧಾರಿತ ಮೆಟ್ಟಿಲು ನಿರ್ಮಾಣ ಕಾಮಗಾರಿ, ಪ್ರದಕ್ಷಣಾ ಪಥ ರೋಪ್ ವೇ ಸೇರಿ ಇತರೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅಗತ್ಯವಾದ ಅರಣ್ಯ ಪ್ರದೇಶದ ಜಮೀನಿಗೆ ಸಂಬಂಧಿಸಿದಂತೆ (ಪರಿವೇಶ್ 2.0) ವೆಬ್ಸೈಟಿನಲ್ಲಿ ಅರ್ಜಿ ಸಲ್ಲಿಸಿ ನಿರಾಕ್ಷೇಪಣಾ ಪತ್ರ ಪಡೆದು, 7ಎಕರೆ ಅರಣ್ಯ ಜಮೀನಿಗೆ ಎನ್ಒಸಿ ಪಡೆಯಲು ಮುಂದಾಗಬೇಕಿದೆ’ ಎಂದರು.
ಅಂಜನಾದ್ರಿ ಅಭಿವೃದ್ಧಿಗಾಗಿ ₹200 ಕೋಟಿ ವೆಚ್ಚದಲ್ಲಿ ಕೈಗೊಳ್ಳಬೇಕಿರುವ ಮೊದಲ ಮತ್ತು ಎರಡನೇ ಹಂತದ ಕಾಮಗಾರಿ, ರೋಪ್ ವೇ (ಪಿಪಿಪಿ ಮಾದರಿ) ಸೇರಿ ಹೆರಿಟೇಜ್ ಇಂಪ್ಯಾಕ್ಟ್ ಅಸೆಸ್ಮೆಂಟ್ ಸ್ಟಡಿ ಅಂತಿಮ ವರದಿ ತಯಾರಿಸಬೇಕು. ಹಾಗೇ ಕೊಪ್ಪಳ ನಗರದ ಜವಾಹರ್ ರಸ್ತೆಯಲ್ಲಿನ ಹಳೆ ಎಸಿ ಕಚೇರಿ ಕಟ್ಟಡದಲ್ಲಿ ವಸ್ತು ಸಂಗ್ರಹಾಲಯ ಸ್ಥಾಪಿಸಲು, ಕೊಪ್ಪಳ ಕೋಟೆಯ ಸಮಗ್ರ ಅಭಿವೃದ್ಧಿ ಬಗ್ಗೆ ಸಹ ಡಿಪಿಆರ್ ತಯಾರಿಸಬೇಕಿದೆ. ಹಾಗೇ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಒಳಪಟ್ಟ ಅಶೋಕನ ಶಿಲಾಶಾಸನ (ಗವಿಮಠ ಪರಿಸರ), ಅಶೋಕನ ಪಾಲ್ಕಿಗುಂಡು ಶಿಲಾಶಾಸನ, ಮಳೆಮಲ್ಲೇಶ್ವರ ದೇವಸ್ಥಾನದ ಬೆಟ್ಟದ ಮೇಲಿನ ಪ್ರಾಚೀನ ದಿನ್ನೆ, ಹಿರೇಬೆಣಕಲ್ ಮೋರೆರ ಬೆಟ್ಟ, ಇಟಗಿ ಗ್ರಾಮದ ಶ್ರೀಮಹಾದೇವ ದೇವಾಲಯ ಸೇರಿ ಕೊಪ್ಪಳದ ಹುಲಿಕೆರೆ ಅಭಿವೃದ್ಧಿಪಡಿಸುವ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ದಪಡಿಸಿ, ಮಾಹಿತಿ ಸಲ್ಲಿಸಬೇಕಿದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಇನ್ನು ಸ್ವದೇಶ್ ದರ್ಶನ್ 2.0 ಯೋಜನೆಯ ಟ್ರಾವೆಲರ್ ನೂಕ್ ರಾಯಲ್ ಕಾಮಗಾರಿ ಕೈಗೊಳ್ಳಲು ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ಸರ್ವೆ ನಂ17ರಲ್ಲಿ 35 ಗುಂಟೆ ಜಮೀನನ್ನು ತರಬೇತಿ ಕೇಂದ್ರ, ವಸತಿ ಉದ್ದೇಶಕ್ಕಾಗಿ ಕೊಪ್ಪಳ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೆಸರಿನಲ್ಲಿ ಕಾಯ್ದಿರಿಸಿದ್ದು, ಈ ಜಮೀನು ಪ್ರವಾಸೋದ್ಯಮ ಇಲಾಖೆಯ ಹೆಸರಿಗೆ ಹಸ್ತಾಂತರಿಸಬೇಕು. ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ವ್ಯಾಪ್ತಿಯಲ್ಲಿ 17, ಕನಕಗಿರಿ ವ್ಯಾಪ್ತಿಯಲ್ಲಿ 3 ಸೇರಿ ಒಟ್ಟು 20 ಸ್ಮಾರಕಗಳನ್ನು ಗುರುತಿಸಿದ್ದು, ರಾಜ್ಯ ಸಂರಕ್ಷಿತ ಸ್ಮಾರಕಗಳೆಂದು ಘೋಷಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿ.ಪಂ ಸಿಇಒ ವರ್ಣಿತ್ ನೇಗಿ, ಎಡಿಸಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ, ಕಮಲಾಪುರದ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಉಪನಿರ್ದೇಶಕ ಆರ್.ಶೇಜೇಶ್ವರ, ಹೊಸಪೇಟೆ ಸೃಷ್ಟಿ ಆರ್ಕಿಟೆಕ್ಟ್ ಶ್ರೀಪಾದ, ಕೊಪ್ಪಳ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಡಿ.ನಾಗರಾಜ ಸೇರಿದಂತೆ ತಹಶೀಲ್ದಾರರು, ಭೂದಾಖಲೆಗಳ ಅಧಿಕಾರಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.