ಕೊಪ್ಪಳ: ಇತ್ತೀಚೆಗೆ ನಡೆದ ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಯಲ್ಲಿ ಸುಮಾರು ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ರಾಜ್ಯದ ಎಲ್ಲಾ ನಿಗಮಗಳ ಹೊರಗುತ್ತಿಗೆ ಕಾರ್ಮಿಕರ ಪದ್ಧತಿಯನ್ನು ರದ್ದುಗೊಳಿಸುವ ಕುರಿತು ಗಂಭೀರವಾಗಿ ಚರ್ಚೆ ನಡೆಯಿತು ಎಂದು ರಾಜ್ಯ ಗುತ್ತಿಗೆ ಕಾರ್ಮಿಕರ ಸಲಹಾ ಮಂಡಳಿಯ ಸದಸ್ಯ ಪಂಪಾಪತಿ ರಾಟಿ ಹುಲಿಗಿ ತಿಳಿಸಿದ್ದಾರೆ.
ಸರ್ಕಾರದ ಕಾರ್ಯದರ್ಶಿ (ಕಾರ್ಮಿಕ ಇಲಾಖೆ) ಎನ್.ವಿ. ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಗುತ್ತಿಗೆ ಕಾರ್ಮಿಕ ಸಲಹಾ ಮಂಡಳಿಯಲ್ಲಿ ಉಪ ಕಾರ್ಯದರ್ಶಿ ಸಂಧ್ಯಾ ನಾಯಕ್, ಕಾರ್ಮಿಕ ಆಯುಕ್ತ ಅಕ್ರಂಪಾಶಾ, ಜಲಸಂಪನ್ಮೂಲ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಲ್. ಸುಬ್ರಹ್ಮಣ್ಯಂ ಹಾಗೂ ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
‘ರಾಜ್ಯದಲ್ಲಿ ಅತಿ ಹೆಚ್ಚು ಸ್ಟೀಲ್ ಉತ್ಪಾದನೆಯ ಘಟಕಗಳು ಇರುವ ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ಕಾರ್ಖಾನೆಗಳಲ್ಲಿ ಗುತ್ತಿಗೆ ಕಾರ್ಮಿಕರನ್ನು ನೇರವಾಗಿ ಉತ್ಪಾದಕತೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಕಾನೂನುಬಾಹಿರವಾಗಿದೆ. ಇದರಿಂದ ತಾಂತ್ರಿಕ ಪದವೀಧರರಿಗೆ ಅನ್ಯಾಯವಾಗುತ್ತಿದೆ ಎನ್ನುವ ವಿಷಯವನ್ನು ಗಮನಕ್ಕೆ ತರಲಾಯಿತು’ ಎಂದು ಪಂಪಾಪತಿ ಹೇಳಿದರು.
‘ಸರ್ಕಾರಿ, ಅರೆ ಸರ್ಕಾರಿ ಮತ್ತು ಖಾಸಗಿ ಉದ್ಯಮಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆದಾರರು ಹಾಗೂ ಮೂಲ ಮಾಲೀಕರಿಗೆ ಕಾನೂನಾತ್ಮಕ ಅರಿವು ನೀಡಲು ಮತ್ತು ಕಾನೂನಾತ್ಮಕ ಸಲಹೆ ಒದಗಿಸಲು ಸಭೆ ನಡೆಸಲು ಸುತ್ತೋಲೆ ಹೊರಡಿಸಲು ತೀರ್ಮಾನಿಸಲಾಯಿತು’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.