ಗಂಗಾವತಿ: ನಗರಸಭೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪೌರಸೇವಾ ನೌಕರರಿಗೆ ಜ್ಯೋತಿ ಸಂಜೀವಿನಿ, ನಗದು ರಹಿತ ಚಿಕಿತ್ಸಾ, ಎಸ್ಎಫ್ಸಿ ವೇತನ ನಿಧಿಯಿಂದ ವೇತನ ಪಾವತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ನಗರಸಭೆ ಕಚೇರಿ ಎದುರು ಪೌರಸೇವಾ ನೌಕರರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಸಂಘಟನೆ ಅಧ್ಯಕ್ಷ ವಹೀದ್ ಖಾನ್ ಮಾತನಾಡಿ, ‘ಪೌರಸೇವಾ ನೌಕರರ ಸಂಘ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಸಂಘವಾಗಿದೆ. ಸರ್ಕಾರಿ ನೌಕರರಿಗೆ ನೀಡಬೇಕಾದ ಸವಲತ್ತು ನೀಡದಿದ್ದರೂ ಹಲವು ವರ್ಷಗಳಿಂದ ಕೆಲಸ ಮಾಡಲಾಗುತ್ತಿದೆ. ಸರ್ಕಾರ ಮಾತ್ರ ನಮ್ಮತ್ತ ಚಿತ್ತಹರಿಸುತ್ತಿಲ್ಲ. ಹಾಗಾಗಿ
ಪೌರಸೇವಾ ನೌಕರರ ಸಂಘ ರಾಜ್ಯದ ಎಲ್ಲೆಡೆ ಕಾರ್ಯ ಸ್ಥಗಿತಗೊಳಿಸಿ, ಬೇಡಿಕೆಗಳ ಈಡೇರಿಕೆಗೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುತ್ತಿದೆ’ ಎಂದರು.
ಕೂಡಲೇ ರಾಜ್ಯ ಸರ್ಕಾರ ನಗರಸಭೆಗಳಲ್ಲಿ ಶೇ 100ರಷ್ಟು ಪೌರಕಾರ್ಮಿಕರನ್ನು ವಿಶೇಷ ನೇಮಕಾತಿ ಅಡಿಯಲ್ಲಿ ನೇಮಕ ಮಾಡಬೇಕು. 2022ನೇ ಸಾಲಿನ ವಿಶೇಷ ನೇಮಕಾತಿ ಅಡಿಯಲ್ಲಿ ಆಯ್ಕೆಯಾದ ಪೌರಕಾರ್ಮಿಕರು, ಲೋಡರ್ಸ್ಗಳಿಗೆ ಎಸ್ಎಫ್ಸಿ ವೇತನ ನಿಧಿಯಿಂದ ವೇತನ ಪಾವತಿಸಬೇಕು. ಪೌರಸೇವಾ ನೌಕರರಿಗೆ ಜ್ಯೋತಿ ಸಂಜೀವಿನಿ, ನಗದು ರಹಿತ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ಬೇಡಿಕೆ ಈಡೇರಿಸಬೇಕು’ ಎಂದು ಒತ್ತಾಯಿಸಿದರು.
ನಗರಸಭೆ ಪೌರಕಾರ್ಮಿಕರು, ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.