ಕೊಪ್ಪಳ: ಆಸ್ಪತ್ರೆಯಲ್ಲಿರುವ ವೈದ್ಯರು ಹಾಗೂ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಸಮಯಕ್ಕೆ ಸರಿಯಾಗಿ ನೀಡುವಂತೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್ ಅವರು ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗೆ ತಿಳಿಸಿದರು.
ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅಲಕನಂದಾ ಮಳಗಿ ಅವರೊಂದಿಗೆ ಜಂಟಿಯಾಗಿ ನಗರದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ ಪರಿಶೀಲಿಸಿದ ನಂತರ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಔಷಧಿಗಳ ಕೊರತೆ ಕಂಡುಬಂದಲ್ಲಿ ಕೆ.ಡಿ.ಎಲ್.ಡಬ್ಲೂ.ಎಸ್.ನಿಂದ ಪಡೆದುಕೊಂಡು ರೋಗಿಗಳಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು. ಸದ್ಯ ಆಸ್ಪತ್ರೆಯಲ್ಲಿ ಲಭ್ಯವಿರುವ ಎ.ಬಿ.ಎ.ಆರ್.ಕೆ./ ಎನ್.ಎಫ್.ಡಿ.ಎಸ್./ ಮುಕ್ತ ನಿಧಿ/ ಜೆ.ಎಸ್.ಎಸ್.ಕೆ ಅನುದಾನದ ಅಡಿಯಲ್ಲಿ ಅಗತ್ಯ ಪ್ರಮಾಣದ ಔಷಧಿಗಳನ್ನು ಖರೀದಿಸಲು ಕ್ರಮ ಕೈಗೊಳ್ಳಿ. ಆಸ್ಪತ್ರೆ ದಾಸ್ತಾನಿನಲ್ಲಿರುವ ವೈದ್ಯಕೀಯ ಉಪಕರಣಗಳನ್ನು ಕೊರತೆ ಇರುವ ವಿಭಾಗಗಳಿಂದ ಬೇಡಿಕೆ ಪಟ್ಟಿಯನ್ನು ಪಡೆದು ಕೂಡಲೇ ವಿತರಿಸಬೇಕು ಎಂದು ಬಯೋ ಮೆಡಿಕಲ್ಎಂಜಿನಿಯರ್ ಅವರಿಗೆ ಸೂಚಿಸಿದರು.
ಆಸ್ಪತ್ರೆಯ ಶೌಚಾಲಯಗಳು, ವಾರ್ಡ್ಗಳು ಹಾಗೂ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಲಭ್ಯವಿರುವ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ನಿಂದ ಅವ್ಯವಸ್ಥೆ ಸರಿಪಡಿಸಿ ಎಂದು ಸೂಚನೆ ನೀಡಿದರು.
ಲಭ್ಯವಿರುವ ಗ್ರೂಪ್ ಡಿ ಸಿಬ್ಬಂದಿಯನ್ನು ಕಾರ್ಯದೊತ್ತಡಕ್ಕೆ ಅನುಗುಣವಾಗಿ ಅವಶ್ಯವಿರುವ ವಾರ್ಡ್ಗಳಿಗೆನಿಯೋಜಿಸಬೇಕು. ಹೆರಿಗೆ ಕೋಣೆ ಮತ್ತು ಎಸ್.ಎನ್.ಸಿ.ಯು ಘಟಕಕ್ಕೆ ದೂರವಾಣಿ ಸಂಪರ್ಕ ಹಾಗೂ ಅಗತ್ಯವಿರುವ ಗ್ರೂಪ್ ಡಿ ಸಿಬ್ಬಂದಿನಿಯೋಜಿಸಿ. ಪ್ರಸ್ತುತ 5 ಜನ ಸೆಕ್ಯೂರಿಟಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಹೆಚ್ಚುವರಿಯಾಗಿ 5 ಜನ ಸೆಕ್ಯೂರಿಟಿಗಳನ್ನು ನೇಮಕ ಮಾಡಿಕೊಳ್ಳಿ ಎಂದು ತಿಳಿಸಿದರು.
ಆಸ್ಪತ್ರೆ ಕಟ್ಟಡದ ಸಣ್ಣ ಪುಟ್ಟ ದುರಸ್ತಿಯ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಹಾಜರಿದ್ದ ಕೆ.ಎಚ್.ಎಸ್.ಡಿ.ಆರ್.ಪಿ. ಬಳ್ಳಾರಿ ವಿಭಾಗದ ಎಂಜಿನಿಯರ್ ಅವರಿಗೆ ಕೂಡಲೇ ದುರಸ್ತಿಯ ಬಗ್ಗೆ ಕ್ರಮವಹಿಸಲು ತಿಳಿಸಲಾಯಿತು.
ಈ ಸಂದರ್ಭ ಜಿಲ್ಲಾ ಶಸ್ತ್ರಚಿಕಿತ್ಸಕಡಾ. ಈಶ್ವರ ಸವಡಿ, ವೈದ್ಯಕೀಯ ಅಧೀಕ್ಷಕರು, ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಹಾಗೂ ಸಹಾಯಕ ಆಡಳಿತ ಅಧಿಕಾರಿಗಳು ಮತ್ತು ವೈದ್ಯರು ಹಾಗೂ ಸಿಬ್ಬಂದಿಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.