ADVERTISEMENT

ಯುವಕ ಸಂಘದಿಂದ ವನಮಹೋತ್ಸವ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 13:48 IST
Last Updated 5 ಜೂನ್ 2020, 13:48 IST
ಹನುಮಸಾಗರದಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಪ್ರಜ್ಞಾವಂತ ಯುವಕ ಸಂಘದ ಸದಸ್ಯರು ಪಟ್ಟಣದ ವಿವಿಧ ಭಾಗಗಳಲ್ಲಿ ನೂರಾರು ಸಸಿಗಳನ್ನು ನಾಟಿ ಮಾಡಿದರು
ಹನುಮಸಾಗರದಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಪ್ರಜ್ಞಾವಂತ ಯುವಕ ಸಂಘದ ಸದಸ್ಯರು ಪಟ್ಟಣದ ವಿವಿಧ ಭಾಗಗಳಲ್ಲಿ ನೂರಾರು ಸಸಿಗಳನ್ನು ನಾಟಿ ಮಾಡಿದರು   

ಹನುಮಸಾಗರ: ವನಮಹೋತ್ಸವಕ್ಕಾಗಿ ಮೂರು ದಿನಗಳಿಂದ ತಯಾರಿ ನಡೆಸಿದ್ದ ಇಲ್ಲಿನ ಪ್ರಜ್ಞಾವಂತ ಯುವಕ ಸಂಘದ ಸದಸ್ಯರು ಶುಕ್ರವಾರ ಪಟ್ಟಣದ ವಿವಿಧ ಭಾಗಗಳಲ್ಲಿ ನೂರಾರು ಸಸಿಗಳನ್ನು ನಾಟಿ ಮಾಡುವ ಮೂಲಕ ವಿಶ್ವಪರಿಸರ ದಿನಾಚರಣೆ ಆಚರಿಸಿದರು.

ಕಾಲೇಜ್ ಪ್ರಾಚಾರ್ಯರಾದ ಬಸಮ್ಮ ಪಟೀಲ ಸಸಿ ನಾಟಿ ಮಾಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.

ತಂಡದಲ್ಲಿ ಕಾಲೇಜ್ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿದ್ದು, ಮೂರು ದಿನಗಳಿಂದ ವಿವಿಧ ಭಾಗದಲ್ಲಿ ಸಸಿ ನಾಟಿ ಮಾಡುವುದಕ್ಕಾಗಿ ತಗ್ಗು ತೆಗೆದಿದ್ದರು, ಕೆಲ ಯುವಕರು ನಾಟಿ ಮಾಡಲು ಬೇಕಾಗಿದ್ದ ಸಸಿಗಳನ್ನು ವಿವಿಧ ಭಾಗಗಳಿಂದ ಸಂಗ್ರಹಿಸಿಕೊಂಡು ಬಂದಿದ್ದರು.

ADVERTISEMENT

‘ಸಸಿ ನಾಟಿ ಮಾಡುವುದಕ್ಕಾಗಿ ನಾವು ಯಾರ ಸಹಾಯ ಕೇಳದೆ ನಮ್ಮ ಸ್ವಂತ ಹಣ ಖರ್ಚು ಮಾಡಿ ವಿಶ್ವಪರಿಸರ ದಿನಾಚರಣೆ ಆಚರಿಸುತ್ತಿದ್ದೇವೆ. ಪರಿಸರ ಸಂರಕ್ಷಣೆಯ ಅವಶ್ಯಕತೆ ಎಷ್ಟಿದೆ ಎಂಬುದು ನಮಗೂ ಗೊತ್ತಿದೆ‘ ಎಂದು ಯುವಕ ಪ್ರವೀಣ ಕೊರಡಕೇರಿ ಹೇಳಿದರು.

ಮುಸ್ತಾಫಾ ನಾಲಬಂದ್ ಮಾತನಾಡಿ, ‘ನಾವೆಲ್ಲರೂ ಒಂದೆ ಬ್ಯಾಚ್‍ನ ವಿದ್ಯಾರ್ಥಿಗಳಾಗಿದ್ದರಿಂದ ಈ ವರ್ಷ ವಿಶೇಷ ಕಾರ್ಯಕ್ರಮ ಹಾಕಿಕೊಳ್ಳುವುದರ ಮೂಲಕ ಸಮಾಜಕ್ಕೆ ಮಾದರಿಯಾಗೋಣ ಎಂದು ತೀರ್ಮಾನಿಸಿ ಈ ಪರಿಸರ ಕಾರ್ಯ ಮಾಡುತ್ತಿದ್ದೇವೆ‘ ಎಂದು ಹೇಳಿದರು.

‘ನಾಟಿ ಮಾಡಿದ ಸಸಿಗಳಿಗೆ ನೀರುಣಿಸುವ ಕಾರ್ಯಕ್ಕೆ ನಮ್ಮಲ್ಲೆ ತಂಡಗಳನ್ನು ಮಾಡಿಕೊಂಡಿದ್ದೇವೆ, ಪ್ರತಿ ಒಂದು ತಂಡ ನಿತ್ಯ ಒಂದೊಂದು ಭಾಗಕ್ಕೆ ಹೋಗಿ ನೀರು ಹಾಕುವ ಕೆಲಸ ಮಾಡುತ್ತವೆ‘ ಎಂದು ಲೋಕೇಶ ಕುರ್ನಾಳ, ಕರಿಸಿದ್ದಪ್ಪ ಪಟ್ಟಣಶೆಟ್ಟಿ, ಪ್ರವೀಣ ಮೆಹರವಾಡೆ, ಮಂಜುನಾಥ ಮೋಟಗಿ ತಿಳಿಸಿದರು.

ಸುಮಾರು 50ಕ್ಕೂ ಹೆಚ್ಚು ಯುವಕರು ಈ ಕಾರ್ಯದಲ್ಲಿ ತೊಡಗಿದ್ದು ಪಟ್ಟಣದಲ್ಲಿ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಮಹೇಶ ಧಲಬಂಜನ್, ಬಸು ನಾಲವಾಡ, ಮಂಜು ಹುಲ್ಲೂರ, ನಾಗರಾಜ ಬಿರಾದರ, ಸಿದ್ದು ಕೋಮಾರಿ, ವಿಷ್ಣು ಭಂಡಾರಿ, ರಹಿಮಾನ ಮೊಮಿನ್, ಭಾರ್ಗವ್ ಕೊಳ್ಳಿ, ಜಾವೀದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.